Tuesday 1 October 2013

ಇಷ್ಟೊಂದು ಗಾಂಧಿಗಳ ಗದ್ದಲದ ಮಧ್ಯೆ ನಾವು ಮರೆತಿರುವ ಗಾಂಧಿಯ ಹೆಸರು ಫಿರೋಜ್!



"A mutiny in my mind has compelled me to rise this debate. When things of such magnitude as I shall describe to you later occur, silence become a crime...."


           ಪ್ರಶ್ನೋತ್ತರ ವೇಳೆಯಲ್ಲಿ ರಾಯ್‌ಬರೇಲಿ ಕ್ಷೇತ್ರದ ಸಂಸದ ಹೀಗೆ ಘರ್ಜಿಸುತ್ತಿದ್ದರೆ, ಇಡೀ ಲೋಕಸಭೆ ಆತನ ಮಾತುಗಳನ್ನು ತದೇಕಚಿತ್ತದಿಂದ ಆಲಿಸುತ್ತಿತ್ತು. ಅಸಲಿಗೆ ಆತ ಮಾತನಾಡುತ್ತಿದ್ದುದೇ ಅಪರೂಪ. ಆದರೆ ಮಾತನಾಡಲು ನಿಂತಾಗಲೆಲ್ಲಾ ಸರ್ಕಾರಿ ಇಲಾಖೆಯೊಂದರ ಹಗರಣವನ್ನೋ, ಅವ್ಯವಸ್ಥೆಯನ್ನೋ ದಾಖಲೆಗಳ ಸಮೇತ ಬಯಲಿಗೆಳೆದು ಸರ್ಕಾರವನ್ನು ಮುಜುಗರಕ್ಕೀಡು ಮಾಡುತ್ತಿದ್ದರು. ಅವರದೇ ಪಕ್ಷದ ಸಂಸದರು ಅವರನ್ನು ಭಯ ಮಿಶ್ರಿತ ಮೆಚ್ಚುಗೆಯಿಂದ 'dangerously well informed person' ಎಂದು ಕರೆಯುತ್ತಿದ್ದರು.

ಅವತ್ತು ಅವರು ದನಿಯೆತ್ತಿದ್ದು ’ಹರಿದಾಸ್ ಮುಂದ್ರಾ’ ಹಗರಣದ ವಿರುದ್ಧ. ಸ್ವಾತಂತ್ರ್ಯಾನಂತರದ ಭಾರತದಲ್ಲಿ ಸರ್ಕಾರವೇ ಭಾಗಿಯಾಗಿದೆ ಎಂಬ ಆರೋಪ ಬಂದ ಮೊದಲ ಹಗರಣ ಅದು. ಅಷ್ಟೇ ಅಲ್ಲ, ದೇಶದ ಇತಿಹಾಸದಲ್ಲಿ ಮೊದಲ ಬಾರಿಗೆ ಕೇಂದ್ರ ಸಚಿವರೊಬ್ಬರು ಭ್ರಷ್ಟಾಚಾರದ ಹೊಣೆ ಹೊತ್ತು ರಾಜೀನಾಮೆ ನೀಡಲು ಕಾರಣವಾದ ಹಗರಣ ಅದು. ಅವತ್ತು ಕೇಂದ್ರದಲ್ಲಿ ಅಧಿಕಾರದಲ್ಲಿದ್ದುದು ಕಾಂಗ್ರೆಸ್ ಪಕ್ಷದ ಸರ್ಕಾರ. ಲೋಕಸಭೆಯಲ್ಲಿ ಹಗರಣವನ್ನು ಎಳೆ‌ಎಳೆಯಾಗಿ ತೆರೆದಿಟ್ಟು ಸರ್ಕಾರ ತಲೆತಗ್ಗಿಸುವಂತೆ ಮಾಡಿದ ವ್ಯಕ್ತಿ ವಿರೋಧ ಪಕ್ಷಕ್ಕೆ ಸೇರಿದವರೇನೂ ಆಗಿರಲಿಲ್ಲ, ಬದಲಿಗೇ ಅದೇ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಆಯ್ಕೆಯಾಗಿದ್ದ ಸದಸ್ಯ. ಅವರ ಪತ್ನಿ ಆಗ ತಾನೇ ಕಾಂಗ್ರೆಸ್ ಪಕ್ಷದ ಭವಿಷ್ಯದ ನಾಯಕಿ ಎಂದು ಗುರುತಿಸಿಕೊಳ್ಳತೊಡಗಿದ್ದರು. ಯಾವ ಸರ್ಕಾರದ ವಿರುದ್ಧ ಅವರು ಆರೋಪಗಳನ್ನು ಮಾಡುತ್ತಿದ್ದರೋ, ಅವರ ಮಾವ ಆಗ ಅದೇ ಸರ್ಕಾರದಲ್ಲಿ ಪ್ರಧಾನಮಂತ್ರಿಯಾಗಿದ್ದರು!!!

ಈ ದೇಶ ಮಹಾತ್ಮಾ ಗಾಂಧಿಯನ್ನು ಯಾವತ್ತಿಗೂ ಮರೆಯಲಾರದು. ಕಡೇ ಪಕ್ಷ ಅವರು ಕರೆನ್ಸಿ ನೋಟುಗಳಲ್ಲಾದರೂ ಜೀವಂತವಿರುತ್ತಾರೆ. ಇಂದಿರಾ ಗಾಂಧಿಯ ಜನಪ್ರಿಯತೆ ಇವತ್ತಿಗೂ ಗ್ರಾಮೀಣ ಪ್ರದೇಶಗಳಲ್ಲಿ ಕಾಂಗ್ರೆಸ್ ಪಕ್ಷದ ಅತಿ ದೊಡ್ಡ ವೋಟ್ ಬ್ಯಾಂಕ್. ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹಿಡಿದು, ರಾಷ್ಟ್ರದ ಅತ್ಯುನ್ನತ ಕ್ರೀಡಾ ಪ್ರಶಸ್ತಿಯವರೆಗೆ ರಾಜೀವ್ ಗಾಂಧಿಯ ಹೆಸರನ್ನು ಕಾಂಗ್ರೆಸ್ ಪಕ್ಷ ಅಜರಾಮರಗೊಳಿಸಿದೆ. ಸೋನಿಯಾ ಗಾಂಧಿ ಇಂದು ಭಾರತದ ಅತ್ಯಂತ ಪ್ರಭಾವೀ ವ್ಯಕ್ತಿ. ಫ಼ೇಸ್‌ಬುಕ್‌ಗೆ ಲಾಗಿನ್ ಆದರೆ ಅಲ್ಲಿ ನಿಮಗೆ ರಾಹುಲ್ ಗಾಂಧಿ ಜೋಕುಗಳಾಗಿ, ಕಾರ್ಟೂನ್‌ಗಳಾಗಿ ಕಾಣಸಿಗುತ್ತಾರೆ. ಮೇನಕಾ ಗಾಂಧಿ ಪ್ರಾಣಿಗಳ ಸಂರಕ್ಷಣೆ ಕುರಿತು ಪತ್ರಿಕೆಗಳಿಗೆ ಬರೆಯುತ್ತಾರೆ. ಹಿಂದೂ ಮೂಲಭೂತವಾದಿಗಳ ಪಾಲಿನ ನೀಲಿ ಕಣ್ಣಿನ ಹುಡುಗ ವರುಣ್ ಗಾಂಧಿಯನ್ನು ಹೇಗೆ ತಾನೇ ಮರೆಯಲು ಸಾಧ್ಯ? ಇವರಲ್ಲಿ ಕನಿಷ್ಠ ಒಬ್ಬರನ್ನಾದರೂ ಪ್ರತೀದಿನವೂ ಒಂದಲ್ಲ ಒಂದು ಕಾರಣಕ್ಕೆ ನೆನಪಿಸಿಕೊಳ್ಳುತ್ತೇವೆ. ಆದರೆ ಯಾರನ್ನು ನಾವಿಂದು ನೆನಪಿಟ್ಟುಕೊಂಡು ಗೌರವಿಸಬೇಕಿತ್ತೋ ಆ ಗಾಂಧಿಯನ್ನು ಮಾತ್ರ ಮರೆತುಬಿಟ್ಟಿದ್ದೇವೆ!

ಅವರು ಫಿರೋಜ್ ಜಹಾಂಗೀರ್ ಗಾಂಧಿ!!

1912ರ ಸೆಪ್ಟೆಂಬರ್ 8ರಂದು ಮುಂಬೈನ(ಅವತ್ತಿನ ಬಾಂಬೆ) ಖೇತವಾಡಿಯ ನವ್‌ರೋಜಿ ನಾಟಕ್‌ವಾಲಾ ಭವನ್‌ನಲ್ಲಿ ಶ್ರೀಮಂತ ಗುಜರಾತಿ ಪಾರ್ಸಿ ಕುಟುಂಬವೊಂದರಲ್ಲಿ ಜನಿಸಿದರು ಫಿರೋಜ್. ಅವರ ತಂದೆ ಜೆಹಾಂಗೀರ್ ಗಾಂಧಿ ಮರೈನ್ ಎಂಜಿನಿಯರ್ ಆಗಿದ್ದರು. ಬಾಲ್ಯದಲ್ಲೇ ತಂದೆಯನ್ನು ಕಳೆದುಕೊಂಡ ಫಿರೋಜ್ ತಾಯಿ ರತ್ತಿಮೈ ಗಾಂಧಿಯೊಂದಿಗೆ, ತಮ್ಮ ಚಿಕ್ಕಮ್ಮ ಶಿರಿನ್‌ರೊಂದಿಗೆ ವಾಸಿಸಲು ಅಲಾಹಾಬಾದ್‌ಗೆ ತೆರಳಿದರು. ತಾಯಿ ಮತ್ತು ಚಿಕ್ಕಮ್ಮರ ಆರೈಕೆಯಲ್ಲಿ ಬೆಳೆದ ಫಿರೋಜ್ ಆಂಗ್ಲೋ ವರ್ನ್ಯಾಕುಲರ್ ಸ್ಕೂಲ್‌ನಲ್ಲಿ ವ್ಯಾಸಂಗ ಮಾಡಿ, ಎವಿಂಗ್ ಕ್ರಿಶ್ಚಿಯನ್ ಕಾಲೇಜಿನಿಂದ ಪದವಿಯನ್ನು ಪಡೆದು ಮುಂದೆ ಪ್ರತಿಷ್ಟಿತ ಲಂಡನ್ ಸ್ಕೂಲ್ ಆಫ಼್ ಎಕಾನಾಮಿಕ್ಸ್‌ನಲ್ಲಿ ಉನ್ನತ ಶಿಕ್ಷಣವನ್ನು ಪಡೆದರು (ಇದೇ ಸಂಸ್ಥೆಯಲ್ಲಿ ನೆಹರೂ ಕೂಡಾ ಅಭ್ಯಾಸ ಮಾಡಿದ್ದರು). ಅಲಾಹಾಬಾದ್‌ನ ಆನಂದ ಭವನಕ್ಕೆ ಪದೇ ಪದೇ ಭೇಟಿ ನೀಡುತ್ತಿದ್ದ ಗಾಂಧಿ, ಪಟೇಲ್ ಮುಂತಾದ ನಾಯಕರನ್ನು ಹತ್ತಿರದಿಂದ ನೋಡಿ ಅವರ ಪ್ರಭಾವಕ್ಕೆ ಸಿಲುಕಿದ ಫಿರೋಜ್ ತಮ್ಮ ಹದಿನೆಂಟನೇ ವಯಸ್ಸಿನಲ್ಲಿಯೇ ಸ್ವಾತಂತ್ರ್ಯ ಚಳುವಳಿಗೆ ಧುಮುಕಿದರು.

ಒಂದೊಮ್ಮೆ ಫಿರೋಜ್ ತಾಯಿ ರತ್ತಿಮೈ, ಗಾಂಧೀಜಿಯವರನ್ನು ಭೇಟಿಯಾಗಿ ತಮ್ಮ ಮಗನಿಗೆ ಹಿಡಿದಿರುವ ಸ್ವಾತಂತ್ರ್ಯ ಹೋರಾಟದ ಹುಚ್ಚು ಬಿಡಿಸಿ, ವಿಧ್ಯಾಭ್ಯಾಸದ ಮೇಲೆ ಗಮನ ನೀಡುವಂತೆ ಸಲಹೆ ನೀಡಿ ಎಂದು ಕೇಳಿಕೊಂಡರು. ನಸುನಕ್ಕ ಗಾಂಧಿ, "ನಿಮ್ಮ ಮಗನ ಕುರಿತು ಯೋಚಿಸಬೇಡಿ. ಆತ ಒಬ್ಬ ಮಹಾನ್ ಕ್ರಾಂತಿಕಾರಿ. ಫಿರೋಜ್‌ನಂತಹ ಏಳು ಯುವಕರು ಒಂದುಗೂಡಿದರೆ ಸಾಕು, ಭಾರತಕ್ಕೆ ಕೇವಲ ಏಳು ದಿನಗಳಲ್ಲಿ ಸ್ವಾತಂತ್ರ್ಯ ತಂದುಕೊಡುತ್ತಾರೆ" ಎಂದಿದ್ದರು!

ಮುಂದೆ ನೆಹರೂ ಕುಟುಂಬಕ್ಕೆ ಹತ್ತಿರವಾದ ಫಿರೋಜ್, ಟಿಬಿ ಖಾಯಿಲೆಯಿಂದ ನರಳುತ್ತಿದ್ದ ನೆಹರೂರ ಪತ್ನಿ ಕಮಲಾ ನೆಹರೂರ ಗೆಳೆಯನಾಗಿ ಜೊತೆಗಿದ್ದರು. ಖಾಯಿಲೆಯ ಕಾರಣದಿಂದ ನೆಹರೂರ ನಿರ್ಲಕ್ಷ್ಯಕ್ಕೆ ತುತ್ತಾಗಿದ್ದ ಕಮಲಾರಿಗೆ ಆತ್ಮಬಂಧುವಾಗಿ ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ಆಕೆ ಸಾಯುವ ದಿನದವರೆಗೆ ಜೊತೆಗಿದ್ದು ಆರೈಕೆ ಮಾಡಿ ಆಕೆಯಲ್ಲಿ ಜೀವನೋತ್ಸಾಹ ತುಂಬಿದರು. ಮುಂದೆ ನೆಹರೂ ಪುತ್ರಿ ಇಂದಿರಾ ಪ್ರಿಯದರ್ಶಿನಿಯನ್ನು ಪ್ರೀತಿಸಿ, 1942ರಲ್ಲಿ ಹಿಂದೂ ಸಂಪ್ರದಾಯದಂತೆ ಮದುವೆಯಾದರು.


1952ರ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ರಾಯ್‌ಬರೇಲಿ ಕ್ಷೇತ್ರದಿಂದ ಆಯ್ಕೆಗೊಂಡ ಫಿರೋಜ್ 1957ರಲ್ಲಿ ಮತ್ತೆ ಅದೇ ಕ್ಷೇತ್ರದಿಂದ ಪುನರಾಯ್ಕೆಯಾದರು. ಇಂದಿರಾ ಗಾಂದಿಗಿಂತ ಮುಂಚೆಯೇ ರಾಜಕೀಯ ಪ್ರವೇಶಿಸಿದ್ದ ಅವರು ನೆಹರೂಗೆ ನಿಷ್ಟೆ ತೋರಿಸಿದ್ದರೆ, ಅವರ ಉತ್ತರಾಧಿಕಾರಿಯಾಗುವ ಸುವರ್ಣ ಅವಕಾಶವನ್ನು ನಿರಾಯಾಸವಾಗಿ ಗಿಟ್ಟಿಸಿಕೊಳ್ಳಬಹುದಿತ್ತು. ಆದರೆ ಅವರೊಳಗಿನ ಪ್ರಾಮಾಣಿಕ ರಾಜಕಾರಣಿ, ನಿರ್ಭೀತ ಪತ್ರಕರ್ತ ಮತ್ತು ಉತ್ಕಟ ದೇಶಪ್ರೇಮಿ ಅವರನ್ನು ಅಂತಹ ಕೆಳಮಟ್ಟದ ರಾಜಕೀಯಕ್ಕಿಳಿಯಲು ಎಂದಿಗೂ ಬಿಡಲಿಲ್ಲ. ಅವತ್ತಿಗಾಗಲೇ ಕಾಂಗ್ರೆಸ್‌ನ ಉನ್ನತ ನಾಯಕರಿಗೆ ಕಾರ್ಪೋರೇಟ್ ವಲಯದ ಉದ್ಯಮಿಗಳ ಜೊತೆ ಗೆಳೆತನ ಇತ್ತು. ಈ ಉದ್ಯಮಿಗಳಿಂದ ಕಾಂಗ್ರೆಸ್ ತನ್ನ ಚುನಾವಣೆ ಖರ್ಚಿಗೆ ದೇಣಿಗೆಯನ್ನೂ ಪಡೆಯುತ್ತಿತ್ತು.

ಆದರೆ ಪಕ್ಷಕ್ಕಿಂತ ದೇಶ ದೊಡ್ಡದು ಎಂದು ನಂಬಿದ್ದ ಫಿರೋಜ್ 1955ರಲ್ಲಿ ದಾಲ್ಮಿಯಾ-ಜೈನ್ ಕಂಪೆನಿಗಳ ಸಮೂಹ ತಾನು ಸ್ಥಾಪಿಸಿದ್ದ ಗ್ವಾಲಿಯರ್ ಬ್ಯಾಂಕ್ ಮತ್ತು ಭಾರತ್ ಇನ್‌ಶ್ಯೂರೆನ್ಸ್ ಕಂಪೆನಿಯಲ್ಲಿ ಸಾರ್ವಜನಿಕರು ತೊಡಗಿಸಿದ್ದ ಲಕ್ಷಾಂತರ ರೂಪಾಯಿ ಠೇವಣಿ ಹಣವನ್ನು ತನ್ನ ಖಾಸಗಿ ಒಡೆತನದ ’ಬೆನೆಟ್ ಮತ್ತು ಕೊಲೆಮನ್’ ಕಂಪೆನಿಯ ಅಭಿವೃದ್ಧಿಗೆ ಹೇಗೆ ಕಾನೂನುಬಾಹಿರವಾಗಿ channelise ಮಾಡುತ್ತಿದೆ ಎಂಬ ವಿವರಗಳನ್ನು ಲೋಕಸಭೆಗೆ ನೀಡಿದರು. ಮುಂದೆ ಬಿರ್ಲಾ ಮತ್ತು ಗೋಯೆಂಕಾ (ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕಾ ಸಮೂಹದ ಗೋಯೆಂಕಾ ಅಲ್ಲ) ಸಮೂಹಗಳ ಇಂಥದೇ ಅನೈತಿಕತೆಗಳನ್ನೂ ಬಯಲಿಗೆಳೆದರು. ಒಬ್ಬ investigative journalistನಂತೆ ಕೆಲಸ ಮಾಡಿದ್ದ ಫಿರೋಜ್ ಈ ಹಗರಣಗಳ ವಿರುದ್ಧ ಎಷ್ಟು ಕರಾರುವಕ್ಕಾಗಿ ಸಾಕ್ಷಿಗಳನ್ನು ಸಂಗ್ರಹಿಸಿದ್ದರೆಂದರೆ ಯಾವ ವಿಚಾರಣಾ ಸಮಿತಿಯನ್ನೂ ನೇಮಿಸದೆ ಕೇವಲ ಎರಡೇ ತಿಂಗಳಲ್ಲಿ ರಾಷ್ಟ್ರಪತಿಗಳು ಸುಗ್ರೀವಾಜ್ಞೆಯೊಂದನ್ನು(ordinance) ಹೊರಡಿಸಿ 'Life Insurance Corporation of India Ltd.(LIC)' ಹೆಸರಿನ ಅಡಿಯಲ್ಲಿ ಒಟ್ಟು 245 ಖಾಸಗಿ ಇನ್‌ಶ್ಯೂರೆನ್ಸ್ ಕಂಪೆನಿಗಳನ್ನು ರಾಷ್ಟ್ರೀಕರಣಗೊಳಿಸಿದರು.

ಆಗ ಫಿರೋಜ್ ಗಾಂಧಿಯ ವಿರುದ್ಧವೇ ಆರೋಪಗಳು ಕೇಳಿ ಬಂದವು. ಪಾರ್ಸಿ ಸಮುದಾಯಕ್ಕೆ ಸೇರಿದ ಫಿರೋಜ್‌ರನ್ನು ಅದೇ ಸಮುದಾಯಕ್ಕೆ ಸೇರಿದ ’ಟಾಟಾ’ಗಳು ತಮ್ಮ ಪ್ರತಿಸ್ಪರ್ಧಿ ಕಂಪೆನಿಗಳನ್ನು ಹಣಿಯಲು ಏಜೆಂಟ್‌ರಂತೆ ಬಳಸಿಕೊಳ್ಳುತ್ತಿದ್ದಾರೆ. ಟಾಟಾರಿಂದ ಫಿರೋಜ್ ಹಣ ಪಡೆದಿದ್ದಾರೆ ಎಂಬಂತಹ ಆರೋಪಗಳನ್ನು ಮಾಡಲಾಯಿತು. ಇಂತಹ ಮಾತುಗಳಿಗೆಲ್ಲಾ ತಲೆ ಕೆಡಿಸಿಕೊಳ್ಳದ ಫಿರೋಜ್ ಕೆಲವೇ ದಿನಗಳಲ್ಲಿ ಟಾಟಾಗಳ ಒಡೆತನದ Tata Engineering and Locomotive Company(TELCO) ಹೇಗೆ ರೈಲ್ವೇ ಎಂಜಿನ್‌ಗಳನ್ನು ದುಪ್ಪಟ್ಟು ಬೆಲೆಗೆ ಸರ್ಕಾರಕ್ಕೆ ಮಾರುತ್ತಿದೆ ಎಂದು ಎಂಜಿನ್‌ಗಳ ತಯಾರಿಕಾ ವೆಚ್ಚ, ವಿದೇಶಿ ಮಾರುಕಟ್ಟೆಯಲ್ಲಿನ ಬೆಲೆ ಮುಂತಾದ ವಿವರಗಳೊಂದಿಗೆ ಬಿಡುಗಡೆ ಮಾಡಿದರು. ಫಿರೋಜ್‌ರ ಒತ್ತಡಕ್ಕೆ ಮಣಿದ ಸರ್ಕಾರ ರೈಲ್ವೇ ಎಂಜಿನ್‌ಗಳನ್ನು ತಯಾರಿಸುವ ಉದ್ದಿಮೆಯೊಂದನ್ನು ಸ್ವತಃ ತಾನೇ ಆರಂಭಿಸಿತು.

ಆದರೆ ಇನ್‌ಶ್ಯೂರೆನ್ಸ್ ಕಂಪೆನಿಗಳು ರಾಷ್ಟ್ರೀಕರಣಗೊಂಡರೂ ಭ್ರಷ್ಟಾಚಾರ ಮಾತ್ರ ನಿಲ್ಲಲಿಲ್ಲ. ಮುಂದೆ  1958ರಲ್ಲಿ ಫಿರೋಜ್ ಬಯಲಿಗೆಳೆದಿದ್ದೇ ಅತ್ಯಂತ ಕುಖ್ಯಾತವಾದ ಹರಿದಾಸ್ ಮುಂದ್ರಾ ಹಗರಣ.  ಎಲ್‌ಐಸಿಯಲ್ಲಿ ಸಾರ್ವಜನಿಕರು ತೊಡಗಿಸಿದ್ದ ರೂ. ಒಂದು ಕೋಟಿಗೂ ಮಿಕ್ಕಿದ ಹಣವನ್ನು ಸರ್ಕಾರ ಮುಂದ್ರಾ ಒಡೆತನದ ಕಂಪೆನಿಯ ಷೇರುಗಳನ್ನು ಅವುಗಳ ಮೌಲ್ಯಕ್ಕಿಂತ ಶೇಕಡಾ 30-40ರಷ್ಟು ಹೆಚ್ಚು ಮೊತ್ತ ನೀಡಿ ಖರೀದಿಸಲು ಬಳಸಿಕೊಂಡಿತ್ತು. ಜೂನ್ 17ರಂದು ರೂ.2.81ಕ್ಕೆ quote ಆಗಿದ್ದ Osler Lamps Manufacturing ಕಂಪೆನಿಯ ಷೇರಿನ ಬೆಲೆ ಜೂನ್ 24ರಂದು ಅನಿರೀಕ್ಷಿತವಾಗಿ ರೂ.4ಕ್ಕೆ ಜಿಗಿದಿತ್ತು. ರೂ.16.87ರಲ್ಲಿ ಸ್ಥಿರವಾಗಿದ್ದ Angelo Brothers ಕಂಪೆನಿಯ ಷೇರಿನ ಮುಖಬೆಲೆ ಇದ್ದಕಿದ್ದಂತೆಯೇ ಜೂನ್ 24ರಂದೇ ರೂ.20.25ಕ್ಕೆ ಏರಿತ್ತು. ಅಚ್ಚರಿಯ ಸಂಗತಿಯೆಂದರೆ ಜೂನ್ 25ರಂದು ಎಲ್‌ಐಸಿ ಈ ಷೇರುಗಳನ್ನು ಖರೀದಿಸಿತ್ತು. ಆದರೆ ಡಿಸೆಂಬರ್‌ನಲ್ಲಿ ಫಿರೋಜ್ ಗಾಂಧಿ ಲೋಕಸಭೆಯಲ್ಲಿ ಈ ಹಗರಣದ ಬಗ್ಗೆ ಹಣಕಾಸು ಸಚಿವರನ್ನು ಪ್ರಶ್ನಿಸುವ ವೇಳೆಗಾಗಲೇ ಸರ್ಕಾರ ಖರೀದಿಸಿದ್ದ ಮುಂದ್ರಾ ಕಂಪೆನಿಯ ಷೇರುಗಳ ಮೌಲ್ಯ ರೂ.37 ಲಕ್ಷಗಳಷ್ಟು ಕುಸಿದು ಸರ್ಕಾರಕ್ಕೆ ಭಾರೀ ನಷ್ಟವುಂಟಾಗಿತ್ತು! ನಿರಂತರ ಒಂದೂವರೆ ಘಂಟೆಗಳ ಕಾಲ ಲೋಕಸಭೆಯಲ್ಲಿ ಈ ಹಗರಣವನ್ನು ಕುರಿತು ಮಾತನಾಡಿದ್ದ ಫಿರೋಜ್ ತಮ್ಮ ಮಾತಿನ ಬಲೆಯಲ್ಲಿ ಅಂದಿನ ಹಣಕಾಸು ಸಚಿವ ಟಿ.ಟಿ.ಕೃಷ್ಣಾಮಚಾರಿಯವರನ್ನು ಎಷ್ಟು ಜಾಣತನದಿಂದ ಟ್ರ್ಯಾಪ್ ಮಾಡಿದ್ದರೆಂದರೆ, ಕೊನೆಗೆ ಅವರು ಈ ಹಗರಣದ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದರು. ಹಣಕಾಸು ಇಲಾಖೆಯ ಕಾರ್ಯದರ್ಶಿ ವಜಾಗೊಂಡರು ಮತ್ತು ಹರಿದಾಸ್ ಮುಂದ್ರಾ ಜೈಲು ಸೇರಿದರು. ಇದಾದ 41 ವರ್ಷಗಳ ನಂತರ ಇಂತಹದ್ದೇ ಹಗರಣವೊಂದು 2001ರಲ್ಲಿ ನಡೆದಿತ್ತು(UTI SCAM). ಆಗ ಹಣಕಾಸು ಸಚಿವರಾಗಿದ್ದ ಯಶವಂತ್ ಸಿನ್ಹಾ ರಾಜೀನಾಮೆಯನ್ನೇನೂ ನೀಡಿರಲಿಲ್ಲ. ಯಾಕೆಂದರೆ ಆಗ ಅವರ ಕುತ್ತಿಗೆ ಪಟ್ಟಿ ಹಿಡಿದು ರಾಜೀನಾಮೆ ಪಡೆಯಲು ಫಿರೋಜ್ ಗಾಂಧಿ ಇರಲಿಲ್ಲ!

ಇವತ್ತು ಇಂಟರ್‌ನೆಟ್ ಮೂಲಕ, ದೂರದರ್ಶನದ ಮೂಲಕ ಷೇರು ಮಾರುಕಟ್ಟೆಯ ಅತೀ ಸಣ್ಣ ಕದಲಿಕೆ ಕೂಡಾ ಕ್ಷಣಾರ್ಧದಲ್ಲಿ ನಮಗೆ ತಿಳಿಯುತ್ತದೆ. ಆದರೆ 1958ರಲ್ಲಿ ಇಂಟರ್‌ನೆಟ್, ಟೆಲಿವಿಷನ್, ಮಾಹಿತಿ ಹಕ್ಕು ಕಾಯ್ದೆ(ಆರ್‌ಟಿಐ) ಇರದಿದ್ದ ಕಾಲದಲ್ಲಿ ಫಿರೋಜ್ ಕೋಲ್ಕತ್ತಾದ ಸ್ಟಾಕ್ ಎಕ್ಸ್‌ಚೇಂಜ್‌ಗೆ ನೂರಾರು ಟೆಲಿಗ್ರಾಮ್‌ಗಳನ್ನು ಕಳಿಸಿ ದಾಖಲೆಗಳನೆಲ್ಲಾ ತರಿಸಿಕೊಂಡು, ತಿಂಗಳುಗಟ್ಟಲೆ ಶ್ರಮವಹಿಸಿ ತಮ್ಮ ವರದಿಯ ಪ್ರತೀ ಪುಟವನ್ನು ಬರೆದಿದ್ದರು! ಈವತ್ತು ಲೋಕಸಭೆಯಲ್ಲಿ ನಿದ್ದೆ ಮಾಡುವ, walk-out ಮಾಡುವ, ಸಿದ್ಧತೆಯಿಲ್ಲದೆ ತಲೆಹರಟೆಯ ಮಾತಾಡಿ ಗಲಾಟೆ ಎಬ್ಬಿಸುವ  ವಿರೋಧ ಪಕ್ಷಗಳ ನೂರಾರು ಸಂಸದರ ಬದಲು ಒಬ್ಬ ಫಿರೋಜ್ ಗಾಂಧಿ ಇದ್ದಿದ್ದರೆ ಎಷ್ಟು ಪರಿಣಮಕಾರಿಯಾಗಿರುತ್ತಿತ್ತು ನೀವೇ ಯೊಚಿಸಿ! ಇಂದು ಲೋಕಸಭೆಯಲ್ಲಿ ಸುಷ್ಮಾ ಸ್ವರಾಜ್‌ರಂಥವರು ಎಷ್ಟೇ ಹೂಂಕಾರ ಹಾಕಿದರೂ ಕ್ಯಾರೇ ಎನ್ನದ ಕಾಂಗ್ರೆಸ್ ಅವತ್ತು ತನ್ನದೇ ಪಕ್ಷದ ಫಿರೋಜ್ ಗಾಂಧಿಯ ಮೌನಕ್ಕೆ ಹೆದರುತ್ತಿತ್ತು. ಫಿರೋಜ್ ಲೋಕಸಭೆಯ ಅಧಿವೇಶನದಲ್ಲಿ ಮೌನವಾಗಿದ್ದಾರೆ ಎಂದರೆ ಮುಂದಿನ ಅಧಿವೇಶನದಲ್ಲಿ ಹಗರಣವೊಂದನ್ನು ಸ್ಫೋಟಿಸುತ್ತಾರೆ ಎಂಬ ಖಾತರಿ ಇತ್ತು ಸರ್ಕಾರಕ್ಕೆ!

1960ರಲ್ಲಿ ತಮ್ಮ 48ನೇ ವಯಸ್ಸಿನಲ್ಲಿ ನಿಧನರಾದ ಫಿರೋಜ್ ಈಗ ಬದುಕಿದ್ದಿದ್ದರೆ ಅವರಿಗೆ ಬರೋಬ್ಬರಿ ನೂರಾಒಂದು ವರ್ಷ ವಯಸ್ಸು. ಬಾಲಿವುಡ್ ನಟಿಯರ ವಾರ್ಡ್‌ರೋಬ್ ಮಾಲ್‌ಫ಼ಂಕ್ಷನ್‌ಗಳನ್ನು ಪ್ರೈಮ್‌ಟೈಮ್‌ನಲ್ಲಿ ತೋರಿಸುವ ನ್ಯೂಸ್ ಚಾನೆಲ್ಲುಗಳು 2012ರ ಸೆಪ್ಟೆಂಬರ್ 12 ಫಿರೋಜ್‌ರ ಜನ್ಮಶತಮಾನೋತ್ಸವವೆಂದು ನೆನಪಿಸಲಿಲ್ಲ. ಕಳೆದ ವರ್ಷವೊಂದರಲ್ಲೇ ರಾಜೀವ್ ಗಾಂಧಿ, ಇಂದಿರಾ ಗಾಂಧಿಯರ ಜನ್ಮದಿನಗಳ ಜಾಹೀರಾತು ನೀಡಲು ರೂ.7.25 ಕೋಟಿ ಸರ್ಕಾರದ ಹಣ ಖರ್ಚು ಮಾಡಿದ, ಮೋತಿಲಾಲ್ ನೆಹರೂ 150ನೇ ಜನ್ಮದಿನ ಆಚರಿಸಿದ ಕಾಂಗ್ರೆಸ್‌ಗೂ ತನ್ನ ಈ ಮೇರು ನಾಯಕನ ನೆನಪಾಗಲಿಲ್ಲ. ತಪ್ಪು ಅವರದಲ್ಲ ಬಿಡಿ, ಭ್ರಷ್ಟಾಚಾರದ ಕೆಸರಲ್ಲಿ ಮುಳುಗಿರುವ ಕಾಂಗ್ರೆಸ್ ಶಾಸ್ತ್ರಿ, ಫಿರೋಜ್‌ರಂತಹ ನಾಯಕರನ್ನು ಗೌರವಿಸುವ ಯೋಗ್ಯತೆಯನ್ನೇ ಕಳೆದುಕೊಂಡಿದೆ!

ಇವತ್ತು ಮೋದಿ ಅಭಿಮಾನಿಗಳು ಫ಼ೇಸ್‌ಬುಕ್ ಟ್ವಿಟ್ಟರ್‌ಗಳಲ್ಲಿ ತಮ್ಮ ನಾಯಕನ ಸಾಮರ್ಥ್ಯವನ್ನು project ಮಾಡುವ ಬದಲು "ಇಂದಿರಾ ಗಾಂಧಿಯ ಚಾರಿತ್ರ್ಯ ಸರಿ ಇರಲಿಲ್ಲ. ಆಕೆಯ ಗಂಡ ಫಿರೋಜ್ ಖಾನ್ ಎಂಬ ಮುಸಲ್ಮಾನ . ಆತನ ತಂದೆ ನವಾಬ್ ಖಾನ್ ನೆಹರೂ ಕುಟುಂಬಕ್ಕೆ ಮದ್ಯ ಸರಬರಾಜು ಮಾಡುತ್ತಿದ್ದರು" ಎಂಬಂತಹ ಕಥೆಗಳನ್ನು ಕಟ್ಟುವ ಕೀಳುಮಟ್ಟಕ್ಕೆ ಇಳಿದಿರುವುದನ್ನು ನೋಡಿದಾಗ ಇದನ್ನೆಲ್ಲಾ ಬರೆಯಬೇಕೆನ್ನಿಸಿತು. ಬಹುಶ್ಃ ಫಿರೋಜ್ ಇವತ್ತು ಬದುಕಿದ್ದಿದ್ದರೆ ಹೌದು ನಾನು ಮುಸಲ್ಮಾನನೇ, ಏನೀಗ? ಎಂದು ನಕ್ಕು ಸುಮ್ಮನಾಗುತ್ತಿದ್ದರು. ರಾಜಕಾರಣಿ, ಪತ್ರಕರ್ತ, ಸಾಮಾಜಿಕ ಹೋರಾಟಗಾರ, Indian Oil Corporation Ltd.ನ ಮೊದಲ ಅಧ್ಯಕ್ಷ, ಇವತ್ತು ಅಣ್ಣಾ ಹಜಾರೆಯ ಚಳುವಳಿ ಮಾಡಲಾಗದಿದ್ದನ್ನು ಅವತ್ತು ಏಕಾಂಗಿಯಾಗಿ ಮಾಡಿ ತೋರಿಸಿದ್ದ ಫ಼ಿರೋಜ್ ಗಾಂಧಿಯ ಕೊಡುಗೆಯನ್ನು ಸ್ಮರಿಸುವ ಕೃತಜ್ಞತೆಯನ್ನು ಈ ದೇಶ ತೋರಿಸದಿದ್ದರೂ ಪರವಾಗಿಲ್ಲ, ಆದರೆ ಅವರನ್ನು ಅವಮಾನಿಸುವ ದುಷ್ಟತನ ನಮಗೇಕೆ ಬೇಕು?








6 comments:

Unknown said...

Savi,,,really good,,:-) even i too thought that he was a muslim,,keep going buddy:-)

ಚಿನ್ಮಯ ಭಟ್ said...

adbhuta baraha sir :-)..aa mahan vyan vyaktigondu salam

Datta3 said...
This comment has been removed by the author.
Datta3 said...

ತುಂಬಾ ಮಾಹಿತಿ ಯುಕ್ತ ಲೇಖನ...
ಚೆನ್ನಾಗಿದೆ. ವಂದನೆಗಳು..

SAVI RAJ said...

thanq soma:)

sunaath said...

ಉತ್ತಮ ಮಾಹಿತಿಯನ್ನು ಕೊಟ್ಟಿದ್ದೀರಿ. ವಂದನೆಗಳು.