ಹೀಗೇಕೆ ಬದುಕುತಿರುವೆ?
ಬದುಕಿಗೆ ಬೆನ್ನು ತಿರುಗಿಸಿ,
ಇದು ಮತ್ತಿನ ಮಧುಪಾತ್ರೆಯಲ್ಲ,
ಕುಡಿದಷ್ಟೂ ಇಂಗದ ವಿಷದ ಬಟ್ಟಲು..
ಈ ಸಂಜೆಯಷ್ಟೇ ಈ ತಿಳಿಗಾಳಿ,
ನಾಳೆ ಮತ್ತೆ ಬೀಸಲಿದೆ ತೂಫಾನು!
ವಿಷದ ನಂಜಿಗೆ ನೀ ನಿತ್ರಾಣ,
ತೂಫಾನಿನ ಮುಂದೆ ನೀ ತರಗೆಲೆ
- ಆಗುವ ಬದಲು;
ಕಿಟಕಿ, ಬಾಗಿಲುಗಳು ಕುಸಿದ
ಈ ಮನೆಗೆ ಮುಕ್ತಿ ನೀಡುವ ಬದಲು...
ಹಾರು ಇನ್ನಷ್ಟು ಎತ್ತರಕ್ಕೆ,
ಏರು ಎಲ್ಲ ಸೆಳೆತಗಳ ಮೀರಿ..
ಮೋಹದ ಬಂಧನಗಳ ಹರಿದು,
ಸಾಗು ಅನಂತದಾಚೆ!
ಬೇಯುತಿದೆ ಭೂಮಿ,
ಸುರಿವ ಮೋಡದ ತುಣುಕಾಗು;
ರೆಕ್ಕೆಯಾಗು,
ತೆವಳುವ ಮನಸುಗಳಿಗೆ;
ಕಾಮಾಟಿಪುರದಲ್ಲಿ ಹುಟ್ಟುವ,
ಕನಸಾದರೂ ಆಗು!..
ಕತ್ತಲಿಗೆ ಬೆಳಕಾಗು,
ಬೆಳಕಿಗೆ ಕಣ್ಣಾಗು;
ಬೆಳಕಿಲ್ಲದ ಜೋಪಡಿಯ ಲಾಂದ್ರದ ಉರಿಯಾಗು!
ನಡುರಾತ್ರಿ ಹೆಜ್ಜೆ ತಪ್ಪಿದ ಹುಡುಗಿಯ,
ಕನ್ನೆತನವಾಗು;
ಇದ್ದಲ್ಲೇ ಸತ್ತು ಗೊಬ್ಬರವಾಗು,
ಇನ್ನೆಲ್ಲೋ ಅನ್ನವಾಗಲು;
ಶೃತಿ ಸತ್ತ ವೀಣೆಯ ತಂತಿಯಾದರೂ ಆಗು!
ಮೌನಕ್ಕೆ ಮಾತಾಗು,
ಮಾತಿಗೆ ಲಯವಾಗು;
ಮಾತು ಮಿತಿ ಮೀರಿದಾಗ ಮತ್ತೆ ಮೌನವಾಗು...
ನೀಲಿಯಾಗು ರೆಕ್ಕೆ ಬಲಿತ
ಮರಿಗಳಿಗೆ,
ಹಸಿರಾಗು ಬಂಜರಾದ ನೆಲಗಳಿಗೆ,
ಬಿಳಿಯಾಗು ಗಡಿಯಲ್ಲಿನ ಕೆಂಪು
ಧ್ವಜಗಳಿಗೆ!
ಇದಾವುದೂ ಆಗದಿದ್ದರೆ ಬಾ-
ಒಂದೇ ಉಸಿರಿನಲ್ಲಿ ಅದಿಷ್ಟೂ ವಿಷವನ್ನು-
ಕುಡಿದು ಮತ್ತೆ ನಗುವುದನ್ನು ಕಲಿ;
ಮೈಯೊಡ್ಡಿ ನಿಲ್ಲು ತೂಫಾನಿನ ಬಿರುಸಿನ ಮುಂದೆ!