Sunday 6 July 2014

ಒಂಭತ್ತು ನ್ಯಾನೋ ಕಥೆಗಳು



* * ೧ * *

ಮಗುವೊಂದು ಅಪ್ಪನನ್ನು ಕೇಳಿತು. "ಅಪ್ಪಾ, ನಾನೂ ನಿನ್ನ ಹಾಗೆ ಬೆಳೆದು ದೊಡ್ಡವನಾಗಬೇಕೆಂದರೆ ಏನು ಮಾಡಬೇಕು?" ಅಪ್ಪ ತಣ್ಣನೆಯ ದನಿಯಲ್ಲಿ ಉತ್ತರಿಸಿದ, "ಬೆಳೆಯಲು ಹಾತೊರೆಯಬೇಡ ಮಗೂ! ನೀನೀಗಲೇ ನನಗಿಂತಲೂ ತುಂಬಾ ದೊಡ್ಡವನು. ಬೆಳೆಯುತ್ತಾ ಬೆಳೆಯುತ್ತಾ ನೀನೂ ನನ್ನಂತೆಯೇ ಚಿಕ್ಕವನಾಗುತ್ತೀಯಾ ಅಷ್ಟೇ.."


* * ೨ * *

ಅವನು ಕ್ರೋಧದಿಂದ ಅವಳ ಕಪಾಳಕ್ಕೆ ಎಷ್ಟು ಬಲವಾಗಿ ಹೊಡೆದನೆಂದರೆ, ಈಗಲೂ ಅವನ ಎದೆಯ ಮೇಲೆ ಅವನ ಕೈ ಬೆರಳುಗಳ ಗುರುತುಗಳಿವೆ..


* * ೩ * *

ನಾನು ಅವನ ದೇವಾಲಯದ ಮೇಲೆ ಕಲ್ಲುಗಳನೆಸೆದೆ, ಅವನ ದೇವರ ಮೂರ್ತಿಯನ್ನು ಮುರಿದು ಹಾಕಿದೆ. ಆದರೆ ಮನೆಗೆ ಬಂದು ನೋಡಿದರೆ ನನ್ನ ದೇವರ ಕೋಣೆಯ ಒಳಗೆ ನಾನೇ ಬೀಸಿದ ಕಲ್ಲುಗಳಿದ್ದವು. ನನ್ನ ದೇವರ ಮೂರ್ತಿಯ ಕೈ ಮುರಿದುಹೋಗಿ, ಅವನ ಕಣ್ಣುಗಳಲ್ಲಿ ರಕ್ತ ಹರಿಯುತಿತ್ತು!


* * ೪ * *

ಗುರುವೊಬ್ಬ ಶಿಷ್ಯನನ್ನು "ಇಷ್ಟು ಸರಳವಾದ ವಿಷಯದ ಜ್ಞಾನವೂ ಇಲ್ಲದ ನೀನು ನಾಚಿಕೆಯಿಂದ ತಲೆತಗ್ಗಿಸಬೇಕು" ಎಂದು ಗದರಿಸಿದ.

ಶಿಷ್ಯ ನಸುನಕ್ಕ. ಗುರು ಮತ್ತೊಮ್ಮೆ ಗದರಿಸಿದ. ಶಿಷ್ಯ ನಗುತ್ತಲೇ ಇದ್ದ. 

ಗುರುವಿನ ಕೋಪ ಮಿತಿ ಮೀರಿತು. ಹತ್ತಿರಕ್ಕೆ ಬಂದು ಅವನ ಬೆನ್ನ ಮೇಲೊಂದು ಗುದ್ದು ನೀಡಿದ. ಆಗಲೂ ಶಿಷ್ಯನ ಮುಖದಿಂದ ನಗು ಮಾಸಲಿಲ್ಲ. ಈಗ ಗುರು ನಾಚಿಕೆಯಿಂದ ತಲೆತಗ್ಗಿಸಿ ನಿಂತ!


* * ೫ * *

ನಿನ್ನನ್ನು ಕೊಂದೆ. ನಾನು ಸತ್ತೆ!


* * ೬ * *

ಇಬ್ಬರು ಹುಚ್ಚರು ರಸ್ತೆಯಲ್ಲಿ ಎದುರಾದರು. ಒಬ್ಬ ಹುಚ್ಚ ಹೇಳಿದ, "ಇತ್ತೀಚಿಗೆ ಈ ಊರಲ್ಲಿ ಹುಚ್ಚರ ಸಂಖ್ಯೆ ಜಾಸ್ತಿಯಾಗಿದೆ. ಸುಮ್ಮನೇ ನಮ್ಮ ಪಾಡಿಗೆ ನಾವು ನಡೆದುಕೊಂಡು ಹೋಗುತ್ತಿದ್ದರೆ, ನಮ್ಮ ಮೇಲೆ ಕಲ್ಲುಗಳನ್ನು ಎಸೆಯುತ್ತಾರೆ!"

ಇನ್ನೊಬ್ಬ ಹುಚ್ಚ ಹೇಳಿದ, "ಪಾಪ ಹುಚ್ಚರಲ್ಲವೇ! ಅವರಿಗೇನು ತಿಳಿಯುತ್ತದೆ. ಅವರನ್ನು ಕ್ಷಮಿಸಿ ಬಿಡು!"


* * ೭ * *

ಒಂದೂರಿನಲ್ಲಿ ಒಂದು ದೇವಸ್ಥಾನವಿತ್ತು. ಆ ದೇವಸ್ಥಾನದ ಅನತಿ ದೂರದಲ್ಲಿಯೇ ವೇಶ್ಯೆಯೊಬ್ಬಳು ಮನೆಮಾಡಿಕೊಂಡಿದ್ದಳು. ಆ ದೇಗುಲದ ಪುರೋಹಿತ ದೇವರ ಪೂಜೆಯನ್ನೇ ತನ್ನ ಜೀವನದ ಏಕಮಾತ್ರ ಕರ್ತವ್ಯವೆಂದು ಭಾವಿಸಿ ಶ್ರದ್ಧೆಯಿಂದ ಆ ಮೂರ್ತಿಯ ಪೂಜೆ ಮಾಡುತ್ತಿದ್ದ. ದೇವರ ಮೂರ್ತಿಗೆ ಅಭಿಷೇಕ ಮಾಡಿ, ಫಲ ಪುಷ್ಪಗಳನ್ನು ಸಮರ್ಪಿಸುತ್ತಿದ್ದ. ಉಚ್ಛ ಸ್ವರದಲ್ಲಿ ಮಂತ್ರಗಳನ್ನು ಪಠಿಸುತ್ತಿದ್ದ. ಆದರೆ ಅದೇ ಸಮಯದಲ್ಲಿ ವೇಶ್ಯೆ ವೀಣೆ ನುಡಿಸುತ್ತಾ, ದೇವರ ಕುರಿತು ತಾನೇ ಹಾಡುಗಳನ್ನು ಕಟ್ಟಿ ತನ್ಮಯಳಾಗಿ ಹಾಡುತ್ತಿದ್ದಳು. ಒಮ್ಮೊಮ್ಮೆ ಭಕ್ತಿಯ ಪರಾಕಾಷ್ಟೆಯಲ್ಲಿ ದೇವರನ್ನೇ ತನ್ನ ಗಂಡನೆಂದು ಕರೆಯುತ್ತಾ ಆತನನ್ನು ಮುದ್ದಾಡುತ್ತಾ ಕಣ್ಣಿರಿಡುತ್ತಿದ್ದಳು. ತನ್ನ ಪೂಜೆಗೆ ಭಂಗ ಉಂಟು ಮಾಡುತ್ತಿದ್ದ ವೇಶ್ಯೆಯ ಸಂಗೀತದಿಂದ ಪುರೋಹಿತನಿಗೆ ಇರಿಸು ಮುರಿಸುಂಟಾಗುತ್ತಿತ್ತು. ಆದರೂ ಎಂದಿಗೂ ತಾಳ್ಮೆ ಕಳೆದುಕೊಳ್ಳದ ಆತ, ಆಕೆಯ ಅಪರಾಧವನ್ನು ಕ್ಷಮಿಸುವಂತೆ ದೇವರನ್ನು ಕೋರುತ್ತಿದ್ದ. ಒಂದು ದಿನ ಪುರೋಹಿತ ಸತ್ತು ಸ್ವರ್ಗಕ್ಕೆ ಹೋದ. ಅಲ್ಲಿ ದೇವರನ್ನು ಕಂಡ ತಕ್ಷಣ ಅವನ ಪಾದಗಳಿಗೆರಗಿ, "ನಾನು ಒಂದು ದಿನವೂ ತಪ್ಪಿಸದಂತೆ ಪ್ರತೀ ಬೆಳಿಗ್ಗೆ ನಿನ್ನ ಪೂಜೆ ಮಾಡಿದ್ದೇನೆ. ನನ್ನ ಪೂಜೆ ನಿನಗೆ ಪ್ರಸನ್ನವಾಯಿತೇ ಪ್ರಭೂ?" ಎಂದು ದೈನ್ಯದಿಂದ ಕೇಳಿದ. 

ದೇವರು ಕಣ್ಣು ಮಿಟುಕಿಸುತ್ತಾ ಉತ್ತರಿಸಿದ, "ಹೌದಾ?!! ನೀನು ಪ್ರತೀ ದಿನ ಬೆಳಿಗ್ಗೆ ನನ್ನನ್ನು ಪೂಜಿಸುತ್ತಿದ್ದೆಯಾ?.. ನನಗೇನು ಗೊತ್ತು?.. ನಾನು ಬೆಳಿಗ್ಗೆ ಹೊತ್ತು ದೇವಸ್ಥಾನದಲ್ಲಿ ಎಲ್ಲಿರುತ್ತಿದ್ದೆ?.. ಆ ವೇಶ್ಯೆಯ ಮನೆಗೆ ಅವಳ ಸಂಗೀತ ಕೇಳಲು ಹೋಗುತ್ತಿದ್ದೆ!"

* * ೮ * *

ಒಂದೂರಿನಲ್ಲಿ ಅತ್ಯಂತ ಮುಗ್ಧನಾದ ಶ್ರೀಮಂತನೊಬ್ಬ ವಾಸವಾಗಿದ್ದ. ಆತನ ಬಂಧುಗಳೇ ಮೋಸದಿಂದ ಆತನ ಮನೆ, ಸಂಪತ್ತನ್ನು ತಮ್ಮ ಹೆಸರಿಗೆ ಬರೆಸಿಕೊಂಡು ಅವನನ್ನು ಮನೆಯಿಂದ ಹೊರ ಹಾಕಿದರು. ಜೀವನದಲ್ಲಿ ವೈರಾಗ್ಯ ಹುಟ್ಟಿ ಆತ ಸನ್ಯಾಸ ಸ್ವೀಕರಿಸಿದ. ಅವನ ಬಂಧುಗಳಿಗೆ ಇಷ್ಟಕ್ಕೇ ತೃಪ್ತಿಯಾಗಲಿಲ್ಲ. ಅವರೆಲ್ಲರೂ ಆತನ ಬಳಿ ಹೋಗಿ, "ನಾವು ಮೋಸದಿಂದ ನಿನ್ನ ಸಂಪತ್ತನ್ನೆಲ್ಲಾ ಲೂಟಿ ಹೊಡೆದು ಶ್ರೀಮಂತರಾದೆವು. ನಿನ್ನಂತಹ ದಡ್ಡ ಇನ್ನೊಬ್ಬನಿಲ್ಲ. ನಿನ್ನ ದಡ್ಡತನಕ್ಕೆ ಕೃತಜ್ಞತೆ ಸಲ್ಲಿಸಲು ಬಂದಿದ್ದೇವೆ" ಎಂದು ವ್ಯಂಗ್ಯದಿಂದ ನಗಲಾರಂಭಿಸಿದರು.

ಸನ್ಯಾಸಿ ನಸುನಗುತ್ತಾ ಹೇಳಿದ, "ನೀವು ಕರುಣೆಯಿಂದ ನನ್ನ ದಾರಿದ್ರ್ಯವನ್ನೆಲ್ಲಾ ಲೂಟಿ ಹೊಡೆದು ನನ್ನನ್ನು ಶ್ರೀಮಂತನನ್ನಾಗಿಸಿದಿರಿ. ನಿಮ್ಮಿಂದ ದೊರೆತ ಜ್ಞಾನಕ್ಕಾಗಿ ನಾನೂ ಕೂಡಾ ನಿಮಗೆ ಕೃತಜ್ಞತೆ ಸಲ್ಲಿಸುತ್ತೇನೆ!"


* * ೯ * *

ಶಿಷ್ಯನೊಬ್ಬ ಗುರುಕುಲದಲ್ಲಿ ಹಲವು ವರ್ಷಗಳ ಕಾಲ ಜ್ಞಾನಾರ್ಜನೆ ಮಾಡಿದ ನಂತರ ಗುರುವಿನ ಬಳಿ ಕೇಳಿದ, "ಗುರುಗಳೇ, ನಾನು ಇಷ್ಟು ವರ್ಷಗಳ ಕಾಲ ನಿಮ್ಮಿಂದ ವಿದ್ಯಾಭ್ಯಾಸ ಪಡೆದಿದ್ದೇನೆ. ನಾನೀಗ ಜ್ಞಾನಿಯಾಗಿದ್ದೇನೆಯೇ?"

ಗುರು ಕೇಳಿದ "ಮಗೂ, ಇಷ್ಟು ವರ್ಷಗಳ ಅಭ್ಯಾಸದಿಂದ ನಿನಗೇನು ತಿಳಿಯಿತು? ಮತ್ತು ನಿನಗೇನು ತಿಳಿದಿಲ್ಲ?"

ಶಿಷ್ಯ ಹೆಮ್ಮೆಯಿಂದ ಉತ್ತರಿಸಿದ "ನನಗೆ ಋಗ್ವೇದ ತಿಳಿದಿದೆ, ಆದರೆ ಅಥರ್ವಣವೇದ ತಿಳಿದಿಲ್ಲ. ನನಗೆ ಖಗೋಳಶಾಸ್ತ್ರ ತಿಳಿದಿದೆ, ಆದರೆ ರಾಜ್ಯಶಾಸ್ತ್ರ ತಿಳಿದಿಲ್ಲ. ನನಗೆ ಭಾಷಾಶಾಸ್ತ್ರ ಸಂಪೂರ್ಣವಾಗಿ ತಿಳಿದಿದೆ, ಆದರೆ ಕಾವ್ಯ ಒಲಿಯಲಿಲ್ಲ. ನನಗೆ ಚರಿತ್ರೆ ತಿಳಿಯಿತು, ಆದರೆ ಅರ್ಥಶಾಸ್ತ್ರ ತಿಳಿಯಲಿಲ್ಲ"

ಗುರು ಶಿಷ್ಯನೆಡೆಗೆ ಕರುಣೆಯಿಂದ ನೋಡಿ ಹೇಳಿದ, "ಮಗೂ, ನೀನು ಜ್ಞಾನಿಯಲ್ಲ!"

ಶಿಷ್ಯ ಮತ್ತೆ ಹಲವು ವರ್ಷಗಳ ಕಾಲ ಕಠಿಣ ಅಭ್ಯಾಸ ಮಾಡಿ ಒಂದು ದಿನ ಗುರುವಿನ ಬಳಿ ಕೇಳಿದ, "ಗುರುಗಳೇ, ಈಗ ಹೇಳಿ ನಾನು ಜ್ಞಾನಿಯಾಗಿದ್ದೇನೆಯೇ?"

ಗುರು ಮತ್ತೆ ಅದೇ ಹಳೆಯ ಪ್ರಶ್ನೆ ಕೇಳಿದ, "ಇಷ್ಟು ವರ್ಷಗಳ ಅಭ್ಯಾಸದಿಂದ ನಿನಗೇನು ತಿಳಿಯಿತು? ಮತ್ತು ನಿನಗೇನು ತಿಳಿದಿಲ್ಲ?"

ಶಿಷ್ಯ ತಲೆತಗ್ಗಿಸಿ ಉತ್ತರಿಸಿದ, "ಗುರುಗಳೇ, ಇಷ್ಟು ವರ್ಷಗಳ ಕಠಿಣ ಅಭ್ಯಾಸದಿಂದ, ನನಗೇನೂ ತಿಳಿದಿಲ್ಲ ಎಂದು ತಿಳಿಯಿತು!"

ಗುರು ಶಿಷ್ಯನ ತಲೆಯೆತ್ತಿ, ಅವನ ಕಿವಿಯಲ್ಲಿ ಮೆಲ್ಲನೆ ಉಸುರಿದ, "ಮಗೂ, ಈಗ ನೀನು ಜ್ಞಾನಿ!"


Thursday 27 March 2014

ಮತ್ತೆ ಮತ್ತೆ ಕಾಡುವ ಆ ಮೂರು ಕಥೆಗಳು ( ಮೂರನೆಯ ಕಥೆಯ ಅರ್ಥ ಹೇಳಿದವರಿಗೆ ಮೊದಲನೆಯ ಕಥೆಯಲ್ಲಿ ಬರುವ ರಾಜನ ಅರ್ಧ ರಾಜ್ಯವನ್ನೂ ಮತ್ತು ಅವನ ಮಗಳನ್ನೂ ಬಹುಮಾನವನ್ನಾಗಿ ನೀಡಲಾಗುವುದು!)

ಕಥೆ ೧: ಖುಷಿ

ಒಂದೂರಲ್ಲಿ ಒಬ್ಬ ರಾಜ ಇದ್ದ. ಅವನಿಗೊಬ್ಬ ಪುಟ್ಟ ರಾಜಕುಮಾರ. ಎಲ್ಲಾ ಮಕ್ಕಳಂತೆಯೇ ಆಡುತ್ತಾ, ಹಾಡುತ್ತಾ, ಖುಷಿಯಿಂದ ಬಾಲ್ಯ ಕಳೆದ ರಾಜಕುಮಾರ, ಹದಿನಾರನೇ ವಯಸ್ಸಿಗೆ ಕಾಲಿಟ್ಟ ಕೂಡಲೇ ಮಂಕಾಗಿ ಹೋಗುತ್ತಾನೆ. ಆಟ, ಊಟ, ಬೇಟ, ಕಲೆ, ಸಂಗೀತ, ನಾಟಕ, ಸೋಮ ಯಾವುದರಲ್ಲಿಯೂ ರಾಜಕುಮಾರನಿಗೆ ಆಸಕ್ತಿ ಇಲ್ಲ. ಸದಾಕಾಲವೂ ನಿರ್ಲಿಪ್ತವಾಗಿ, ನಿರ್ವಿಕಾರವಾಗಿ, ಆಕಾಶವೇ ತಲೆಯ ಮೇಲೆ ಬಿದ್ದ ಹಾಗೆ ಆಡುತ್ತಿರುವ ಮಗನನ್ನು ನೋಡಿ ರಾಜ ಕೂಡಾ ಚಿಂತೆಗೆ ಬೀಳುತ್ತಾನೆ. ರಾಜಕುಮಾರನನ್ನು ಖುಷಿಗೊಳಿಸಲು ದೇಶವಿದೇಶಗಳಿಂದ ನರ್ತಕಿಯರು, ಕವಿಗಳು, ಸಂಗೀತಗಾರರು, ನಟರು, ವಿದೂಷಕರನ್ನು ಕರೆಸುತ್ತಾನೆ. ಸುರಸುಂದರಿಯರಾದ ಯುವತಿಯರನ್ನು ಕರೆಸಿ ಅವರೊಂದಿಗೆ ಜಲಕ್ರೀಡೆಯನ್ನು ಆಡಿಸುತ್ತಾನೆ! ಆದರೂ ರಾಜಕುಮಾರನ ಬೇಸರ ಮಾತ್ರ ಹೋಗುವುದಿಲ್ಲ. ಬೇಸತ್ತ ರಾಜ ಸೀದಾ ತನ್ನ ಮಗನ ಬಳಿಗೇ ಹೋಗಿ "ಮಗನೇ, ನಿನ್ನ ಚಿಂತೆಗೆ ಕಾರಣ ಏನು? ಮಗನನ್ನೇ ಸಂತೋಷಪಡಿಸಲಾಗದ ರಾಜ, ಇನ್ನು ಪ್ರಜೆಗಳನ್ನು ಹೇಗೆ ಸಂತೋಷಪಡಿಸುತ್ತಾನೆ ಎಂದು ಜನರು ಆಡಿಕೊಳ್ಳುತ್ತಿದ್ದಾರೆ. ಈಗಲಾದರೂ ಹೇಳು ನಿನ್ನನ್ನು ಸಂತೋಷಪಡಿಸಲು ನಾನೇನು ಮಾಡಬೇಕು? ಬೇಕಿದ್ದರೆ ಒಂದು ಕೋಟಿ ಚಿನ್ನದ ನಾಣ್ಯಗಳು ಖರ್ಚಾದರೂ ಪರವಾಗಿಲ್ಲ. ನಿನ್ನ ಸಂತೋಷಕ್ಕಾಗಿ ನಾನು ಏನನ್ನು ಬೇಕಾದರೂ ತಂದುಕೊಡುತ್ತೇನೆ" ಎಂದನು.

          ಈ ಮಾತುಗಳನ್ನು ಕೇಳಿ ರಾಜಕುಮಾರ "ಅಪ್ಪಾ, ನನಗೂ ನನ್ನ ವಯಸ್ಸಿನ ಎಲ್ಲರಂತೆಯೇ ಖುಷಿಯಾಗಿರಬೇಕೆಂಬ ಆಸೆ. ಆದರೆ ನನ್ನ ದುಃಖಕ್ಕೆ ಕಾರಣವೇನೆಂದು ನನಗೇ ತಿಳಿದಿಲ್ಲ. ನೀವು ನನಗೋಸ್ಕರ ಏನನ್ನಾದರೂ ತಂದು ಕೊಡುವುದಿದ್ದರೆ ’ಖುಷಿ’ಯನ್ನು ತಂದುಕೊಡಿ" ಎಂದನು. ತಕ್ಷಣ ರಾಜ ತನ್ನ ಮಂತ್ರಿಗಳ, ಜ್ಯೋತಿಷಿಗಳ, ಚಿಂತಕರ ತುರ್ತು ಸಭೆ ಕರೆದು ತನ್ನ ಮಗನಿಗೆ ’ಖುಷಿ’ಯನ್ನು ಹುಡುಕಿ ತಂದು ಕೊಡುವಂತೆ ಸೂಚಿಸುತ್ತಾನೆ. ಒಬ್ಬೊಬ್ಬರು ಒಂದೊಂದು ಸಲಹೆ ಕೊಡುತ್ತಾರೆ. ಕೊನೆಯಲ್ಲಿ ಜ್ಯೋತಿಷಿಯೊಬ್ಬ ಕವಡೆ ಹಾಕಿ, ಎಣಿಸಿ, ಗುಣಿಸಿ "ರಾಜನ್, ನಿನ್ನ ಸಾಮ್ರಾಜ್ಯದಲ್ಲಿ ಯಾವುದೇ ರೀತಿಯ ಚಿಂತೆ, ದುಃಖಗಳಿಲ್ಲದೆ ಅತ್ಯಂತ ಸಂತೋಷವಾಗಿರುವ ಮನುಷ್ಯನನ್ನು ಹುಡುಕು. ಅವನು ಧರಿಸಿರುವ ಬಟ್ಟೆಯಲ್ಲಿ ’ಖುಷಿ’ ಇದೆ. ಆ ಬಟ್ಟೆಯನ್ನು ರಾಜಕುಮಾರ ಧರಿಸಿದರೆ ಬಟ್ಟೆಯಲ್ಲಿರುವ ’ಖುಷಿ’ ನಿಮ್ಮ ಮಗನೊಳಗೆ ಸೇರಿ ಆತ ಮೊದಲಿನಂತಾಗುತ್ತಾನೆ" ಎಂದು ಪರಿಹಾರ ಸೂಚಿಸಿದನು. ಜ್ಯೋತಿಷಿಯ ಮಾತಿಗೆ ತಲೆದೂಗಿದ ರಾಜ ತನ್ನ ಸಾಮ್ರಾಜ್ಯದಲ್ಲೇ ಅತ್ಯಂತ ಸಂತೋಷವಾಗಿರುವ ವ್ಯಕ್ತಿ ನಾಳೆಯೇ ತನ್ನ ಅರಮನೆಗೆ ಬಂದು ತಾನು ಉಟ್ಟಿರುವ ಬಟ್ಟೆಯನ್ನು ನೀಡಿದರೆ ಅವನಿಗೆ ತನ್ನ ಅರ್ಧ ರಾಜ್ಯವನ್ನೇ ಬಹುಮಾನವನ್ನಾಗಿ ನೀಡುತ್ತೇನೆ ಎಂದು ಎಲ್ಲಾ ಊರುಗಳಲ್ಲಿಯೂ ಡಂಗೂರ ಹೊಡೆಸಿದನು!

ಮಾರನೆಯ ದಿನ ಬೆಳಿಗ್ಗೆ ಅರಮನೆಯ ಮುಂದೆ ಜನಜಾತ್ರೆಯೇ ಸೇರುತ್ತದೆ. ರೈತರು, ಅಧಿಕಾರಿಗಳು, ಜಮೀನ್ದಾರರು, ಕಳ್ಳರು, ಕೊತ್ವಾಲರು ಹೀಗೇ ಲಕ್ಷಾಂತರ ಮಂದಿ ಬಂದು ಸೇರುತ್ತಾರೆ. ರಾಜ ಒಬ್ಬೊಬ್ಬರನ್ನೇ ಪರೀಕ್ಷೆ ಮಾಡುತ್ತಾ ಹೋಗುತ್ತಾನೆ. ಅರ್ಧ ರಾಜ್ಯದ ಆಸೆಗೆ ’ಖುಷಿ’ಯ ಮುಖವಾಡ ಹಾಕಿಕೊಂಡು ನಿಂತ ಒಬ್ಬೊಬ್ಬರ ಮನಸ್ಸಲ್ಲೂ ನೂರಾರು ಚಿಂತೆಗಳು ಗೂಡು ಕಟ್ಟಿರುತ್ತವೆ. ರೈತರಿಗೆ ಮಳೆಯ ಚಿಂತೆ, ಅಧಿಕಾರಿಗಳಿಗೆ ಲೋಕಾಯುಕ್ತರ ಚಿಂತೆ, ಜಮೀನ್ದಾರರಿಗೆ ಕಳ್ಳರ ಚಿಂತೆ, ಕಳ್ಳರಿಗೆ ಕೊತ್ವಾಲರ ಚಿಂತೆ, ಅಜ್ಜಿಗೆ ಅನ್ನದ ಚಿಂತೆಯಾದರೆ, ಮೊಮ್ಮಗಳಿಗೆ ಬಾಯ್‌ಫ್ರೆಂಡ್ ಚಿಂತೆ! ಹೀಗೆ ಇವರೆಲ್ಲರೂ ತನ್ನ ಮಗನ ಹಾಗೆಯೇ ದುಃಖಿತರಾಗಿರುವವರೇ ಎಂದು ತಿಳಿದು ರಾಜ ನಿರಾಶನಾಗುತ್ತಾನೆ.

ಹೀಗೆ ದಿನಗಳು ಕಳೆಯುತ್ತಿರಲು ಒಂದು ದಿನ ರಾಜ ತನ್ನ ಕುದುರೆಯನ್ನೇರಿ ಬೇಟೆಗೆ ಹೊರಡುತ್ತಾನೆ. ಮಧ್ಯಾಹ್ನದವರೆಗೆ ಅಲೆದರೂ ಯಾವ ಪ್ರಾಣಿಯೂ ಸಿಗದೆ ಬಿಸಿಲಲ್ಲಿ ಬಸವಳಿದ ಅವನಿಗೆ ದೂರದಲ್ಲೊಂದು ಕುರಿ ಹಿಂಡು ಮತ್ತು ಆ ಕುರಿಗಳನ್ನು ಮೇಯಿಸುತ್ತಿರುವ ಹುಡುಗನೊಬ್ಬ ಕಾಣುತ್ತಾನೆ. ತನ್ನಷ್ಟಕ್ಕೇ ಹಾಡುತ್ತಾ, ಕುಣಿಯುತ್ತಿರುವ ಹುಡುಗನನ್ನು ನೋಡಿದ ರಾಜನಿಗೆ ತನ್ನ ರಾಜ್ಯದಲ್ಲಿ ಚಿಂತೆಗಳೇ ಇಲ್ಲದೆ ಅತ್ಯಂತ ಸಂತೋಷವಾಗಿರುವ ವ್ಯಕ್ತಿ ಈತನೊಬ್ಬನೇ ಇರಬೇಕು ಎನ್ನಿಸುತ್ತದೆ. ದೂರದಿಂದಲೇ ಆತನಿಗೆ "ನನ್ನೊಂದಿಗೆ ಅರಮನೆಗೆ ಬಾ! ನಿನಗೆ ಅರ್ಧರಾಜ್ಯವನ್ನು ಕೊಡುತ್ತೇನೆ" ಎಂದು ಕರೆಯುತ್ತಾನೆ. ಇದನ್ನು ಕೇಳಿದ ಕುರಿ ಕಾಯುವ ಹುಡುಗ "ನಾನು ಕುರಿ ಮೇಯಿಸಿಕೊಂಡೇ ಖುಷಿಯಾಗಿದ್ದೇನೆ. ನಿನ್ನ ಅರ್ಧರಾಜ್ಯವನ್ನು ನೀನೆ ಇಟ್ಟುಕೋ" ಎನ್ನುತ್ತಾನೆ. ಈಗ ರಾಜನಿಗೆ ಈತನೇ ಅತ್ಯಂತ ಸಂತೋಷವಾಗಿರುವ ವ್ಯಕ್ತಿ  ಎನ್ನುವುದು ಯಾವ ಅನುಮಾನವೂ ಇಲ್ಲದೇ ಧೃಡವಾಗುತ್ತದೆ. "ಹೋಗಲಿ, ನಿನ್ನ ಬಟ್ಟೆಯನ್ನಾದರೂ ಬಿಚ್ಚಿಕೊಡು" ಎಂದು ರಾಜ ಬೇಡಿಕೊಳ್ಳುತ್ತಾನೆ. ಅದಕ್ಕೆ ಕುರಿ ಮೇಯಿಸುವವನು " ಬೇಕಿದ್ದರೆ ನೀನೇ ಬಂದು ಬಿಚ್ಚಿಕೊಂಡು ಹೋಗು" ಎಂದು ಹೇಳಿ ತನ್ನ ಹಾಡು ಮತ್ತು ಕುಣಿತವನ್ನು ಮುಂದುವರಿಸುತ್ತಾನೆ. ಸರಿ ಎಂದ ರಾಜ ಕುದುರೆಯಿಂದಿಳಿದು ಆತನ ಹತ್ತಿರಕ್ಕೆ ಹೋಗಿ ಅವನ ಬಟ್ಟೆಗೆ ಕೈ ಹಾಕುತ್ತಾನೆ.

ಕೈ ಹಾಕಿದ ರಾಜನಿಗೆ ಅಚ್ಚರಿ ಕಾದಿರುತ್ತದೆ. ಆ ಕುರಿ ಮೇಯಿಸುವ ಹುಡುಗ ಬಟ್ಟೆಯನ್ನೇ ಹಾಕಿರುವುದಿಲ್ಲ!!

(ಡೆನ್ಮಾರ್ಕ್‌ನ ಪ್ರಸಿದ್ಧ ಜಾನಪದ ಕಥೆ)

ಕಥೆ ೨: ಕೌಪೀನ(ಲಂಗೋಟಿ)

ಒಂದು ಹಳ್ಳಿ. ಆ ಹಳ್ಳಿಯ ಅಂಚಿನಲ್ಲಿ ದಟ್ಟವಾದ ಕಾಡು. ಆ ಕಾಡಿನ ಮಧ್ಯೆ ಹೊಳೆಯ ದಂಡೆಯ ಮೇಲೆ ಜೋಪಡಿಯೊಂದನ್ನು ನಿರ್ಮಿಸಿಕೊಂಡು ಸನ್ಯಾಸಿಯೊಬ್ಬ ಧ್ಯಾನ ತಪಸ್ಸುಗಳಲ್ಲಿ ಕಾಲ ಕಳೆಯುತ್ತಿರುತ್ತಾನೆ. ಒಂದು ಲಂಗೋಟಿ ಬಿಟ್ಟು ಬೇರೇನನ್ನೂ ಧರಿಸದ ಆತ ಪ್ರತೀದಿನ ಹಳ್ಳಿಯಲ್ಲಿ ಭಿಕ್ಷೆ ಬೇಡಿ ತಂದ ಆಹಾರವನ್ನು ಮಾತ್ರ ತಿನ್ನುತ್ತಿರುತ್ತಾನೆ. ಒಂದು ದಿನ ಅವನು ನದಿಗೆ ಸ್ನಾನ ಮಾಡಲು ಹೋದಾಗ ಅವನ ಲಂಗೋಟಿಯನ್ನು ಇಲಿಗಳು ಕಚ್ಚಿ ಹರಿದು ಹಾಕುತ್ತವೆ. ಆವತ್ತು ಹಳ್ಳಿಗೆ ಭಿಕ್ಷೆಗೆ ಹೋದ ಸನ್ಯಾಸಿ ಅನ್ನದ ಜೊತೆ ಒಂದು ಹೊಸ ಲಂಗೋಟಿಯನ್ನೂ ಭಿಕ್ಷೆ ಬೇಡಿ ತರುತ್ತಾನೆ. ಆದರೆ ಎರಡೇ ದಿನದಲ್ಲಿ ಈ ಹೊಸ ಲಂಗೋಟಿಯನ್ನೂ ಇಲಿಗಳು ಕಚ್ಚಿ ಹರಿದು ಹಾಕುತ್ತವೆ. ಸನ್ಯಾಸಿ ಹಳ್ಳಿಗೆ ಹೋಗಿ ಮತ್ತೊಂದು ಲಂಗೋಟಿ ಭಿಕ್ಷೆ ಕೇಳುತ್ತಾನೆ. ಇದನ್ನು ನೋಡಿದ ಹಳ್ಳಿಯವನೊಬ್ಬ "ಹೀಗೆ ಪದೇ ಪದೇ ಲಂಗೋಟಿಯನ್ನು ಭಿಕ್ಷೆ ಬೇಡುವ ಬದಲು ಬೆಕ್ಕೊಂದನ್ನು ಸಾಕಿಬಿಡಿ. ಇಲಿಗಳ ತೊಂದರೆ ತಪ್ಪುತ್ತದೆ. ನಿಮ್ಮ ಲಂಗೋಟಿಯೂ ಉಳಿಯುತ್ತದೆ" ಎಂದು ಸಲಹೆ ನೀಡುತ್ತಾನೆ. ಸನ್ಯಾಸಿಗೂ ಈ ಸಲಹೆ ಇಷ್ಟವಾಗಿ ಬೆಕ್ಕೊಂದನ್ನು ಸಾಕುತ್ತಾನೆ. ಈಗ ಇಲಿಗಳ ಕಾಟವೇನೋ ನಿಂತುಹೋಯಿತು. ಆದರೆ ಸನ್ಯಾಸಿಗೆ ತನ್ನ ಆಹಾರದ ಜೊತೆಗೆ ಬೆಕ್ಕಿಗೆ ಕುಡಿಸಲು ಹಾಲನ್ನೂ ಭಿಕ್ಷೆ ಬೇಡುವ ಪರಿಸ್ಥಿತಿ ಒದಗುತ್ತದೆ.

ಹೀಗೆ ಒಂದಿಷ್ಟು ದಿನಗಳು ಕಳೆದ ಮೇಲೆ ಅದೇ ಹಳ್ಳಿಯವನು ಮತ್ತೆ ಸನ್ಯಾಸಿಯ ಬಳಿ ಬಂದು "ಹೀಗೆ ದಿನವೂ ಹಾಲನ್ನು ಭಿಕ್ಷೆ ಬೇಡುವ ಬದಲು ಹಸುವೊಂದನ್ನು ಸಾಕಿಬಿಡಿ! ನಿಮ್ಮ ಹಾಲಿನ ಸಮಸ್ಯೆ ನೀಗುತ್ತದೆ" ಎಂದು ಉಪಾಯವೊಂದನ್ನು ಹೇಳುತ್ತಾನೆ. ಹಳ್ಳಿಯವನ ಮಾತಿಗೆ ತಲೆದೂಗಿದ ಸನ್ಯಾಸಿ ಹಸುವನ್ನು ಸಾಕುತ್ತಾನೆ. ಈಗ ಹಾಲಿನ ಸಮಸ್ಯೆಯೇನೋ ತೀರಿತು. ಆದರೆ ಹಸುವಿಗೆ ತಿನ್ನಿಸಲು ಹುಲ್ಲು ಎಲ್ಲಿಂದ ಬರಬೇಕು ಸನ್ಯಾಸಿಗೆ? ಹಳ್ಳಿಗೆ ತೆರಳಿ ಹುಲ್ಲನ್ನು ಭಿಕ್ಷೆ ಕೇಳುತ್ತಾನೆ. ಒಂದು ವಾರ ಕಳೆಯುವಷ್ಟರಲ್ಲಿ ಮತ್ತೆ ಹಳ್ಳಿಯವನು ಸಿಕ್ಕಿ "ಹೀಗೆ ಪ್ರತಿದಿನವೂ ಹುಲ್ಲನ್ನು ಬೇಡುವ ಬದಲು, ನಿಮ್ಮ ಗುಡಿಸಲಿನ ಸುತ್ತಲಿನ ಬಯಲಿನಲ್ಲಿ ಭತ್ತ ಬೆಳೆದುಬಿಡಿ! ಹುಲ್ಲನ್ನು ಹಸುವಿಗೆ ಹಾಕಿ ಭತ್ತವನ್ನು ನೀವು ಉಪಯೋಗಿಸಿದರೆ ನಿಮ್ಮ ಭಿಕ್ಷೆಯ ಸಮಸ್ಯೆಯೇ ನೀಗುತ್ತದೆ" ಎಂದನು! ಹಳ್ಳಿಯವನ ಮಾತು ಕೇಳಿ ಖುಷಿಯಾದ ಸನ್ಯಾಸಿ ಮೊದಲು ಸಣ್ಣ ಜಾಗದಲ್ಲಿ ಭತ್ತ ಬೆಳೆಯುತ್ತಾನೆ. ವರ್ಷವರ್ಷವೂ ಭತ್ತದ ಫಸಲು ಹೆಚ್ಚುತ್ತಾ ಹೋಗಿ, ಭತ್ತದ ಪೈರು ಗುಡಿಸಲಿನ ಸುತ್ತಲಿನ ಇಡೀ ಬಯಲನ್ನೇ ಹಬ್ಬಿ ನಿಂತು ಕೆಲವೇ ವರ್ಷಗಳಲ್ಲಿ ಆತ ದೊಡ್ಡ ಜಮೀನ್ದಾರನೇ ಆಗಿಹೋಗುತ್ತಾನೆ! ಈಗ ನೂರಾರು ಎಕರೆ ಜಮೀನಿನ ಕೆಲಸ ಮತ್ತು ಮನೆ ಕೆಲಸಗಳ ಜವಾಬ್ದಾರಿ ಎರಡನ್ನೂ ನಿಭಾಯಿಸುವುದು ಆತನಿಗೆ  ಕಷ್ಟವಾಗುತ್ತದೆ. ಸನ್ಯಾಸಿಯ ಕಷ್ಟ ನೋಡಿದ ಹಳ್ಳಿಯವನು "ಒಂದು ಮದುವೆಯಾಗಿಬಿಡಿ. ನೀವು ಜಮೀನಿನ ಕೆಲಸ ನೋಡಿಕೊಂಡರೆ, ಹೆಂಡತಿ ಮನೆಯ ಜವಾಬ್ದಾರಿ ನೋಡಿಕೊಳ್ಳುತ್ತಾಳೆ. ನಿಮ್ಮ ಹೊರೆ ಕಡಿಮೆಯಾಗುತ್ತದೆ" ಎಂದು ಸಲಹೆ ನೀಡಿದನು. ಈ ಮಾತು ಸನ್ಯಾಸಿಗೂ ಹಿತವೆನಿಸಿ ಶೀಘ್ರದಲ್ಲಿಯೇ ಹೆಣ್ಣೊಂದನ್ನು ಹುಡುಕಿ ಮದುವೆಯಾಗುತ್ತಾನೆ. ಸನ್ಯಾಸಿಯಾಗಿದ್ದವನು ಸಂಸಾರಿಯಾಗಿ ಹೆಂಡತಿ, ಮಕ್ಕಳು, ಬಂಧು, ಬಳಗದೊಡನೆ ಸುಖ(?)ವಾಗಿ ಬಾಳುತ್ತಾನೆ!

(ಆಚಾರ್ಯ ರಜನೀಶ್ ಹೇಳಿದ ಕಥೆ)

ಕಥೆ ೩: ಜ್ಞಾನ

ಗುರು ಶಿಷ್ಯರಿಬ್ಬರ ನಡುವೆ ಮಾತುಕತೆ ನಡೆಯುತ್ತಿದೆ.

ಶಿಷ್ಯ ಕೇಳುತ್ತಾನೆ: "ಗುರುಗಳೇ, ಕಣ್ಣು ಎಂದರೆ ಏನು?"

ಗುರು: "ಕಣ್ಣು ಎಂದರೆ ಕಣ್ಣಿನ ಕಣ್ಣು!"

ಶಿಷ್ಯ: "ಕಿವಿ ಎಂದರೆ ಏನು?"

ಗುರು: "ಕಿವಿ ಎಂದರೆ ಕಿವಿಯ ಕಿವಿ!"

ಶಿಷ್ಯ: "ನಾಲಗೆ ಎಂದರೆ ಏನು?"

ಗುರು: "ನಾಲಗೆ ಎಂದರೆ ನಾಲಗೆಯ ನಾಲಗೆ!"

(ಉಪನಿಷತ್ತಿನ ಒಂದು ಕಥೆ)

ಈ ಮೂರೂ ಕಥೆಗಳನ್ನು ಓದಿದರೆ ನಿಮಗೆ ನಗು ಬರಬಹುದು. ಆದರೆ ಈ ಕಥೆಗಳ ಹಿಂದೆ ಆಳವಾದ ಫಿಲಾಸಫಿ ಇದೆ. ಮೊದಲನೆಯ ಕಥೆಯಲ್ಲಿ ಬರುವ ಕುರಿ ಮೇಯಿಸುವವನಿಗೂ, ಶ್ರವಣಬೆಳಗೊಳದ ಗೊಮ್ಮಟೇಶ್ವರನಿಗೂ, ಗೋಪಾಲಕೃಷ್ಣ ಅಡಿಗರ "ಬೆತ್ತಲಾಗದೇ ಬಯಲು ಸಿಕ್ಕದಿಲ್ಲಿ" ಎಂಬ ಸಾಲುಗಳಿಗೂ ಏನಾದರೂ ಸಂಬಂಧವಿರಬಹುದೇ ಯೋಚಿಸಿ. ಎರಡನೆಯ ಕಥೆಯನ್ನು ನಮ್ಮ ಬದುಕಿಗೆ ಅನ್ವಯಿಸಿ ನೋಡಿದರೆ ಇಲ್ಲಿ ಬರುವ ಸನ್ಯಾಸಿ, ಹಳ್ಳಿಯವನು, ಲಂಗೋಟಿ, ಇಲಿಗಳು ಏನನ್ನು ಸಂಕೇತಿಸುತ್ತವೆ ತಿಳಿಯಿತೇ? ಮೊದಲೆರಡು ಕಥೆಗಳಿಗಿಂತಲೂ ಅರ್ಥಪೂರ್ಣವಾದುದು ಮೂರನೆಯ ಕಥೆ. ಬಹುಶಃ ಜಗತ್ತಿನ ಮೊದಲ ನ್ಯಾನೋ ಕಥೆ ಇದೇ ಇರಬಹುದು. ಮೂರನೆಯ ಕಥೆಯ ಅರ್ಥ ಹೇಳಿದವರಿಗೆ ಮೊದಲನೆಯ ಕಥೆಯಲ್ಲಿ ಬರುವ ರಾಜನ ಅರ್ಧ ರಾಜ್ಯವನ್ನೂ ಮತ್ತು ಅವನ ಮಗಳನ್ನೂ ಬಹುಮಾನವನ್ನಾಗಿ ನೀಡಲಾಗುವುದು! ಪ್ರಯತ್ನಿಸಿ ನೋಡಿ!!




ಹೈಕುಗಳು

(A HAIKU is a Japanese form of poetry with exactly 17 alphabets and three lines, first line being 5 syllables, second line being 7 syllables and third line being 5 syllables.)





ಹೂ ತುಳಿದ ಪಾ-
ದಗಳ ಚುಚ್ಚಿದ್ದು ಪ
  -ರಾಗದ ಹುಡಿ! 

 *
ಮುತ್ತುಗಳ ಭಾ-
ರ ಕಣ್ಣ ಮೇಲಿಳಿಸಿ
ತುಟಿ ನಿರಾಳ!

*
ನಿನ್ನ ಎದೆಯೊ-
ಳಗಿನ ಬೆಂಕಿ ನನ್ನ-
ನ್ನಷ್ಟೇ ಸುಡಲಿ!

  *
ರೆಕ್ಕೆ ಮುರಿದ
ಹಕ್ಕಿಯ ಆಸೆಗಳು
ನೀಲಿ ಆಕಾಶ!

  *
ನನ್ನ ಮೇಲಾಣೆ
ನಿನ್ನ ಹೃದಯ ಕದ್ದ-
ವಳು ನಾ’ನಲ್ಲ’!

  *
ಭೂಮಿ ಬೆತ್ತಲು,
ಮುಗಿಲಿನ ಕತ್ತಲು
ಸುರಿದ ಸೋನೆ!

  *
ನೀನು ಬಂದಾಗ
ಕಣ್ಮುಚ್ಚಿದೆ, ನಾನಿನ್ನೂ
ಸತ್ತಿರಲಿಲ್ಲ!

  *
ದೇವರು ನನ್ನ
ನಂಬಿರಲಿಲ್ಲ ಈಗ
ನಾನೂ ನಾಸ್ತಿಕ!

  *
ನಿನ್ನ ಕಣ್ಣುಗ-
ಳ ಪರಿಮಳ ನನ-
ಗಷ್ಟೇ ಕೇಳಲಿ!

*

ನೀ ಬರಲು ನ- 
ನ್ನ ಕನಸೊಳಗೆ ನಿ-

ದ್ದೆಗೂ ಎಚ್ಚರ!


*
ಜೇನು ತೊಯ್ದ ನಿ-
ನ್ನ ತುಟಿಗಳ ಹಿಂದೆ
ನಾಗರ ವಿಷ!

*


Wednesday 15 January 2014

ಅವರು ಹಚ್ಚಿಟ್ಟು ಹೋದ ಹಣತೆಯ ಬೆಳಕು ನಮ್ಮೊಳಗಿನ ಕತ್ತಲೆಯನ್ನು ಕರಗಿಸಲಿ...

ಹಣತೆ ಹಚ್ಚುತ್ತೇನೆ ನಾನೂ,
ಈ ಕತ್ತಲನ್ನು ಗೆದ್ದು ನಿಲ್ಲುತ್ತೇನೆಂಬ ಜಿದ್ದಿನಿಂದಲ್ಲ;
ಲೆಕ್ಕವೇ ಇರದ ದೀಪಾವಳಿಯ ಹಡಗುಗಳೇ
ಇದರಲ್ಲಿ ಮುಳುಗಿ ಕರಗಿರುವಾಗ
ನಾನು ಹಚ್ಚುವ ಹಣತೆ ಶಾಶ್ವತವೆಂಬ ಭ್ರಾಂತಿ ನನಗಿಲ್ಲ





        ಕವಿಗೆ ಸಾವಿಲ್ಲ. ಆತ ತನ್ನ ಕವಿತೆಗಳ ಮೂಲಕ ಚಿರಂತನವಾಗಿ ಉಸಿರಾಡುತ್ತಿರುತ್ತಾನೆ. ಇತ್ತೀಚಿನ ಕವಿಗಳ ಮಾತು ಬಿಡಿ. ’ಮಾನವ ಜಾತಿ ತಾನೊಂದೇ ವಲಂ’ ಎಂದು ಎಂದೋ ಹೇಳಿದ ಪಂಪನನ್ನು ಇವತ್ತಿಗೂ ನೆನಪಿಸಿಕೊಳ್ಳುತ್ತೇವೆ. ’ನೀರೊಳಗಿರ್ದುಂ ಬೆಮರ್ತನುರಗಪತಾಕಂ’ ಎಂಬ ಸಾಲುಗಳ ಮೂಲಕ ವರ್ಣಿಸಲಾಗದ ರೋಮಾಂಚನವಾಗಿ ರನ್ನ ಕಾಡುತ್ತಾನೆ. ತನ್ನ ಕೃತಿಯನ್ನು ’ವಿರಹಿಗಳ ಶೃಂಗಾರ’ ಎಂದು ಬಣ್ಣಿಸಿದ ಕುಮಾರವ್ಯಾಸನ ಪ್ರತಿಭೆಯ ಬಗ್ಗೆ ಹೆಮ್ಮೆ ಪಡುತ್ತೇವೆ. ’ಅನಿಕೇತನ’ದ ಮೂಲಕ ಕುವೆಂಪು, ’ನಾಕುತಂತಿ’ಯಿಂದ ಬೇಂದ್ರೆ, ’ಮೈಸೂರು ಮಲ್ಲಿಗೆ’ಯಿಂದ ನರಸಿಂಹಸ್ವಾಮಿ, ’ಯಾವ ಮೋಹನ ಮುರಲಿ ಕರೆಯಿತೋ’ ಮೂಲಕ ಅಡಿಗರು, ಇವತ್ತಿಗೂ ನಮ್ಮೊಳಗಿನ ಪ್ರೀತಿಯಾಗಿ, ಕ್ರಾಂತಿಯಾಗಿ, ಅಧ್ಯಾತ್ಮವಾಗಿ, ವೈರಾಗ್ಯವಾಗಿ ಜೀವಂತವಿದ್ದಾರೆ. ’ಲೂಸಿಯಾ’ದಂತಹ ಆಧುನಿಕ ಸಂವೇದನೆಯ ಚಿತ್ರದಲ್ಲಿಯೂ ಹನ್ನೆರಡನೆಯ ಶತಮಾನದಲ್ಲಿ ಬದುಕಿದ್ದ ಕನಕದಾಸರು ಪ್ರಸ್ತುತರಾಗುತ್ತಾರೆ ಎಂದರೆ, ಕವಿಯೊಬ್ಬನ ಆಲೋಚನೆ, ಬದುಕಿನ ಕುರಿತಾದ ಒಳನೋಟಗಳು, ಆತ ಪ್ರತಿಪಾದಿಸುವ ಮೌಲ್ಯಗಳು ಎಷ್ಟು ಸಾರ್ವಕಾಲಿಕವಾದುವು ಎಂದು ಅಚ್ಚರಿಯಾಗುತ್ತದೆ. ’ಕರ್ವಾಲೋ’ ಓದುತ್ತಿದ್ದರೆ ಇವತ್ತು ಬದುಕಿಲ್ಲದ ತೇಜಸ್ವಿ ನಮ್ಮ ಪಕ್ಕದಲ್ಲೇ ಕುಳಿತು ಕಥೆ ಹೇಳುತ್ತಿದ್ದಾರೆ ಎನ್ನಿಸುವಷ್ಟು ಆಪ್ತರೆನಿಸುತ್ತಾರೆ.

ಮೊನ್ನೆ ’ರಾಷ್ಟ್ರಕವಿ’ ಡಾ.ಜಿ.ಎಸ್.ಶಿವರುದ್ರಪ್ಪ ನಿಧನರಾದ ಸುದ್ದಿ ತಿಳಿದಾಗ ಈ ಆಲೋಚನೆಗಳೆಲ್ಲವೂ ಮನಸ್ಸಿನಲ್ಲಿ ಸುಳಿದು ಹೋದವು. ಜಿ.ಎಸ್.ಎಸ್. ವಿಶಿಷ್ಟತೆ ಎಂದರೆ ಅವರು ನವೋದಯ ಕಾಲದ ಶ್ರೇಷ್ಠ ಕವಿಗಳಾದ ಕುವೆಂಪು, ಬೇಂದ್ರೆ, ಪುತಿನಗಿಂತ ಕಿರಿಯರು. ನಂತರದ ತಲೆಮಾರಿನ ಲೇಖಕರಾದ ಅನಂತಮೂರ್ತಿ, ಕಂಬಾರ, ತೇಜಸ್ವಿಗಿಂತ ವಯಸ್ಸಿನಲ್ಲಿ ಹಿರಿಯರು. ಈ ವೈಶಿಷ್ಟ್ಯವನ್ನು ಅವರ ಕಾವ್ಯದಲ್ಲಿಯೂ ಕಾಣಬಹುದು. ಬಹುಶಃ ಕನ್ನಡ ಸಾಹಿತ್ಯದ ಸಂದರ್ಭದಲ್ಲಿ ಈ ಎರಡು ತಲೆಮಾರುಗಳ ನಡುವಿನ ಸಾಹಿತ್ಯದ ಹಲವು ಸ್ಥಿತ್ಯಂತರಗಳಿಗೆ ಸಾಕ್ಷಿಯಾಗಿ ಅಪ್ರಸ್ತುತರಾಗದೆ ಬರೆದವರು, ಬದುಕಿದವರು ಇಬ್ಬರು ಮಾತ್ರ. ಒಬ್ಬರು ಚೆನ್ನವೀರ ಕಣವಿ, ಇನ್ನೊಬ್ಬರು ಜಿ.ಎಸ್.ಶಿವರುದ್ರಪ್ಪ. ಕುವೆಂಪು ಎಂಬ ಮಹಾನ್ ವಟವೃಕ್ಷದ ನೆರಳಿನಲ್ಲಿ ಕವಿಯಾಗಿ ಅರಳಿದ ಜಿ.ಎಸ್.ಎಸ್ ಅವರ ಆರಂಭದ ಕವಿತೆಗಳಲ್ಲಿ ಕುವೆಂಪು ಕಾವ್ಯದ ಪ್ರಭಾವ ಕಾಣಿಸುತ್ತದೆಯಾದರೂ ಅದನ್ನು ಮೀರಿ ತಮ್ಮದೇ ಆದ ಕವಿತೆ ಕಟ್ಟುವ ಶೈಲಿಯೊಂದನ್ನು ಕಂಡುಕೊಳ್ಳುವ ಹಂಬಲ ಮತ್ತು ಅನಿವಾರ್ಯತೆಯಿಂದಾಗಿ ಹೊಸದೊಂದು ಪಥವನ್ನು ನಿರ್ಮಿಸಿಕೊಂಡು, ಆ ಪಥದಲ್ಲಿಯೇ ಬಲು ಎತ್ತರಕ್ಕೆ ಏರಿದರು.

ಜಿ.ಎಸ್.ಎಸ್ ಬರೆಯಲು ಆರಂಭಿಸಿದ ದಿನಗಳಲ್ಲಿ ಕನ್ನಡ ಸಾಹಿತ್ಯ ನವೋದಯದ ರಾಜಮಾರ್ಗದಲ್ಲಿ ಸಾಗುತ್ತಿತ್ತು. ಎಲ್ಲಾ ಸ್ತರದ ಜನರ ಬೌದ್ಧಿಕ ಹಸಿವನ್ನೂ ಸಾಹಿತ್ಯ ನೀಗಿಸುತ್ತಿತ್ತು. ಬಹುಪಾಲು ಜನರ ಮನೆಯೊಳಗೆ ಟಿವಿ ಕಾಲಿಟ್ಟಿರಲಿಲ್ಲ. ಅದೆಷ್ಟೋ ಮನೆಗಳಲ್ಲಿ ಕುಮಾರವ್ಯಾಸ ಭಾರತ ವಾಚನದೊಂದಿಗೆ ದಿನ ಆರಂಭವಾಗುತ್ತಿತ್ತು. ಅನಕೃ ಕಾದಂಬರಿಗಳನ್ನು, ಕೆ.ಎಸ್.ನ ಪದ್ಯಗಳನ್ನು, ಕೈಲಾಸಂ ನಾಟಕಗಳನ್ನು ಜನ ಮುಗಿಬಿದ್ದು ಓದುತ್ತಿದ್ದರು. ನರಸಿಂಹಸ್ವಾಮಿ, ಬೇಂದ್ರೆ ಪದ್ಯಗಳಲ್ಲಿನ ಪ್ರೀತಿಯ ಉತ್ಕಟತೆ ಮತ್ತು ಪ್ರೀತಿಯನ್ನೂ ಅಧ್ಯಾತ್ಮದ ಎತ್ತರಕ್ಕೆ ಏರಿಸಿದ ಕುವೆಂಪು ಕಾವ್ಯಗಳ ಪ್ರಭಾವ ಅವತ್ತಿನ ತಲೆಮಾರಿನ ಒಂದಿಷ್ಟು ಹುಡುಗ-ಹುಡುಗಿಯರನ್ನಾದರೂ ದಾರಿ ತಪ್ಪದ ಹಾಗೆ ಪೊರೆದಿತ್ತು. ಆ ಕಾಲದ ರಾಜಕಾರಣಕ್ಕೆ ಎಸ್.ನಿಜಲಿಂಗಪ್ಪ,  ಶಾಂತವೇರಿ ಗೋಪಾಲಗೌಡರಂಥ ನಾಯಕರು ತಮ್ಮ ನಿಷ್ಠೆ, ಪ್ರಾಮಾಣಿಕತೆಯಿಂದ ಘನತೆ ತುಂಬಿದ್ದರು. ಸಾಹಿತ್ಯ ಕ್ಷೇತ್ರವಂತೂ ರಾಜಕೀಯದಿಂದ ಸಂಪೂರ್ಣ ಮುಕ್ತವಾಗಿತ್ತು. ತಾತ್ವಿಕ ಭಿನ್ನಾಭಿಪ್ರಾಯಗಳ ಹೊರತಾಗಿಯೂ ನವೋದಯದ ಶ್ರೇಷ್ಠ ಸಾಹಿತಿಗಳು ಪರಸ್ಪರರೊಂದಿಗೆ ಗೌರವ, ಆತ್ಮೀಯ ಭಾವ ಹೊಂದಿದ್ದರು. ರಾಮಾಯಣದ ಪ್ರಸಿದ್ಧ ಕಥೆಯೊಂದನ್ನು ತಮ್ಮ ಆಧುನಿಕ ದೃಷ್ಠಿಕೋನಕ್ಕೆ ಸರಿಹೊಂದುವಂತೆ ಮಾರ್ಪಾಟು ಮಾಡಿ ಕುವೆಂಪು ’ಶೂದ್ರ ತಪಸ್ವಿ’ ರಚಿಸಿದಾಗ ’ಪುರಾಣ ಭಂಜನೆ’ಯನ್ನು ವಿರೋಧಿಸಿದ್ದರು ಮಾಸ್ತಿ ವೆಂಕಟೇಶ ಅಯ್ಯಂಗಾರ್. ಇಷ್ಟೆಲ್ಲಾ ಭಿನ್ನಾಭಿಪ್ರಾಯಗಳ ಹೊರತಾಗಿಯೂ ಈ ಇಬ್ಬರು ದಿಗ್ಗಜರು ಪರಸ್ಪರರ ಬಗ್ಗೆ ಹೊಂದಿದ್ದ ಗೌರವ ಅಭಿಮಾನಗಳಿಗೆ ಕುವೆಂಪುರವರ ’ಸನ್ಯಾಸಿ ಮತ್ತು ಇತರ ಕಥೆಗಳು’ ಕಥಾಸಂಕಲನಕ್ಕೆ ಮಾಸ್ತಿ ಬರೆದ ಮುನ್ನುಡಿ ಮತ್ತು ಕುವೆಂಪು ಆತ್ಮಚರಿತ್ರೆ ’ನೆನಪಿನ ದೋಣಿಯಲ್ಲಿ’ ಓದಿದರೆ ಪುರಾವೆ ದೊರೆಯುತ್ತದೆ. ಅವತ್ತಿನ ಕರ್ನಾಟಕದ ಸಾಹಿತ್ಯಕ, ಸಾಮಾಜಿಕ, ಸಾಂಸ್ಕೃತಿಕ ಲೋಕಕ್ಕೆ ಸಿದ್ಧಾಂತಕ್ಕಿಂತ ಮೌಲ್ಯಗಳು ಮುಖ್ಯವಾಗಿದ್ದವು.

ಆದರೆ ಜಿ.ಎಸ್.ಎಸ್. ನೋಡ ನೋಡುತ್ತಿದ್ದಂತೆ ನಂಬಲಾಗದಷ್ಟು ಬದಲಾವಣೆಗಳಾದವು. ಪುಸ್ತಕಗಳ ಜಾಗವನ್ನು ಮೆಗಾ ಸೀರಿಯಲ್‌ಗಳು, ರಿಯಾಲಿಟಿ ಶೋಗಳು ಆಕ್ರಮಿಸಿದವು. ನವ್ಯದ ಕವಿಗಳು ಅರ್ಥವಾಗದ ಹಾಗೆ ಬರೆಯುವುದನ್ನೇ ಕಾವ್ಯ ಎಂದುಕೊಂಡ ಪರಿಣಾಮವಾಗಿ ಜನ ಕವಿಗಳಿಂದ, ಕವಿತೆಗಳಿಂದ ಮಾರು ದೂರ ಓಡಿದರು. ನಮ್ಮ ತಲೆಮಾರಿಗೆ ಪ್ರೀತಿ ಮತ್ತು ಆಕರ್ಷಣೆಯ ಮಧ್ಯೆ ವ್ಯತ್ಯಾಸವೇ ತಿಳಿಯದಾಯಿತು. ರಾಜಕಾರಣಿಗಳು ಸಾರ್ವಜನಿಕ ಬದುಕು ಮತ್ತು ವೈಯಕ್ತಿಕ ಬದುಕು ಎರಡರಲ್ಲಿಯೂ ಭ್ರಷ್ಠರಾದರು. ಒಂದೇ ಪಕ್ಷದ ನಾಯಕರು ಒಬ್ಬರ ಚೆಡ್ಡಿ ಇನ್ನೊಬ್ಬರು ಬಿಚ್ಚಿ ಬೆತ್ತಲಾದರು. ಪ್ರಶಸ್ತಿ, ಪುರಸ್ಕಾರಗಳು, ವಿಧಾನ ಪರಿಷತ್ ಸದಸ್ಯತ್ವ, ಅಕಾಡೆಮಿಗಳ ಅಧ್ಯಕ್ಷ ಸ್ಥಾನದ ಆಸೆಗೆ ಬಿದ್ದ ಸಾಹಿತಿಗಳು ರಾಜಕಾರಣಿಗಳ ಹೆಗಲ ಮೇಲೆ ಕೈ ಹಾಕಿದರು. ಪರಸ್ಪರರ ಮೇಲಿನ ಅಸೂಯೆ, ಅಸಹನೆಗಳನ್ನು ಹತ್ತಿಕ್ಕಿಕೊಳ್ಳಲಾಗದೇ ಇದ್ದಾಗ ಒಬ್ಬರ ಮೇಲೊಬ್ಬರು ಕೆಸರೆರಚಿಕೊಂಡರು. ಒಬ್ಬ ಸಾಹಿತಿಯಂತೂ ಒಂದು ಹೆಜ್ಜೆ ಮುಂದೆ ಹೋಗಿ ಒಂದು ನಿರ್ದಿಷ್ಟ ಗುಂಪಿನ ಲೇಖಕರನ್ನು ’ನಾಮರ್ದ’ರೆಂದು ಜರಿದರು. ಹೊಸ ತಲೆಮಾರಿನ ಕವಿಗಳು ಜೀವನ್ಮುಖಿಯಾಗಿ ಬರೆಯುವ ಸಾಧ್ಯತೆಯನ್ನೇ ತೊರೆದು ಜಾಗತೀಕರಣದ ಕರಾಳ ಮುಖದ ಬಗ್ಗೆ ಬರೆಯುವುದನ್ನೇ ಫ್ಯಾಷನ್ ಆಗಿಸಿಕೊಂಡರು. ಬೆಣ್ಣೆ ದೋಸೆ ತಿಂದು ನೊರೆ ನೊರೆ ಕಾಫಿ ಹೀರುತ್ತಿದ್ದ ಮಂದಿ ಮೆಕ್‌ಡೊನಾಲ್ಡ್, ಕಾಫಿ ಡೇನತ್ತ ಮುಖ ಮಾಡಿದರು. ಆರು ಕಾಸಿಗೊಂದು ರೊಟ್ಟಿ ಸುಡುತ್ತಿದ್ದ ರೊಟ್ಟಿ ಅಂಗಡಿಗಳ ಜಾಗದಲ್ಲಿ ದುಬಾರಿ ರೋಟಿ ಘರ್‌ಗಳು ತಲೆಯೆತ್ತಿದವು. ಜಿ.ಎಸ್.ಎಸ್. ಬದುಕುತ್ತಿದ್ದ ಊರಿನಲ್ಲಿಯೇ ಜನ ಕನ್ನಡದಲ್ಲಿ ಮಾತನಾಡುವುದನ್ನು ಅವಮಾನ ಎಂದುಕೊಂಡರು. ಜಾತಿಗೊಂದರಂತೆ ಮಠಗಳು ಹುಟ್ಟಿಕೊಂಡವು. ಅಧ್ಯಾತ್ಮ ಭೋಧಿಸಬೇಕಾದ ಧಾರ್ಮಿಕ ಕೇಂದ್ರಗಳು ಓಟ್‌ಬ್ಯಾಂಕ್‌ಗಳಾದವು. ಮೌಲ್ಯಗಳು ಹಿಂದೆಂದೂ ಕಾಣದಷ್ಟು ಅಧಃಪತನಕ್ಕಿಳಿದವು.

ಇಂತಹ ನಿರಾಶಾದಾಯಕ ಬೆಳವಣಿಗೆಗಳ ನಡುವೆಯೂ ಭರವಸೆ ಕಳೆದುಕೊಳ್ಳದೆ ಬರೆದರು ಜಿ.ಎಸ್.ಎಸ್. ನವ್ಯದ ಅಬ್ಬರದಲ್ಲಿ ನವೋದಯದ ಲೇಖಕರು ಅಪ್ರಸ್ತುತರಾಗಿ ತೆರೆಮರೆಗೆ ಸರಿದಾಗ ನವ್ಯ ಮತ್ತು ನವೋದಯ ಎರಡರ ರಸವನ್ನೂ ಹೀರಿ ತಮ್ಮದೇ ಆದ ದಾರಿಯನ್ನು ಕಂಡುಕೊಂಡರು. ಪರಂಪರೆ ಮತ್ತು ಆಧುನಿಕತೆಯ ಮಧ್ಯೆ ಸಮನ್ವಯ ಸಾಧಿಸಿದರು. ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಸಾರಥ್ಯ ಹಿಡಿದು ಕೆ.ವಿ.ನಾರಾಯಣ, ಎಚ್.ಎಸ್.ರಾಘವೇಂದ್ರರಾವ್‌ರಂಥ ವಿಭಿನ್ನ ನೆಲೆಯ ವಿಮರ್ಶಕರ ಗುಂಪನ್ನು ಕಟ್ಟಿ ಬೆಳೆಸಿ ತಮ್ಮ ಶಿಷ್ಯರು ಎತ್ತರಕ್ಕೇರುವುದನ್ನು ನೋಡಿ ಆನಂದಿಸಿದರು. ಕುವೆಂಪು ಕಾವ್ಯ ಪ್ರಕೃತಿಯ ನಿಗೂಢತೆಗೆ, ಬೇಂದ್ರೆ ಅಧ್ಯಾತ್ಮಕ್ಕೆ, ಅಡಿಗರು ಇಹಕ್ಕೆ, ಪು.ತಿ.ನ. ಕಾವ್ಯ ಭಕ್ತಿಗೆ ಅಂಟಿಕೊಂಡ ಹಾಗೆ ಜಿ.ಎಸ್.ಎಸ್. ಕವಿತೆಗಳು ’ಬೆಳಕಿ’ಗಾಗಿ ಹಾತೊರೆದವು. ಕನ್ನಡದ ಶ್ರೇಷ್ಠ ಲೇಖಕರು ತಮ್ಮ ಕೃತಿಗಳ ಹೊರತಾಗಿಯೂ ತಮ್ಮದೆ ಆದ ವಿಶಿಷ್ಟ ಗುಣಗಳಿಂದಾಗಿ ನಮಗೆ ಇಷ್ಟವಾಗುತ್ತಾರೆ. ಗಾಂಭೀರ್ಯದಿಂದ ಕುವೆಂಪು, ಮರುಳುತನದಿಂದ ಬೇಂದ್ರೆ, ಸಿಟ್ಟಿನಿಂದ ಕಾರಂತ, ಚಾರ್ಮ್‌ನಿಂದ ಅನಂತಮೂರ್ತಿ, ವಿಕ್ಷಿಪ್ತತೆಯಿಂದ ಲಂಕೇಶ್, ಉಢಾಫ಼ೆಯಿಂದ ತೇಜಸ್ವಿ ಇಷ್ಟವಾದರೆ ಇಂತಹ ಯಾವ ಕಾರಣಗಳೂ ಇಲ್ಲದೆ ಕೇವಲ ತಮ್ಮ ಕವಿತೆಗಳಿಂದ ಮಾತ್ರ ಇಷ್ಟವಾದವರು ಜಿ.ಎಸ್.ಎಸ್. ಸರ್ಕಾರ ’ರಾಷ್ಟ್ರಕವಿ’ ಗೌರವ ನೀಡಿ ಸನ್ಮಾನಿಸಿದಾಗಲೂ, ಈ ಗೌರವ ಕಣವಿ ಅಥವಾ ಕಂಬಾರರಿಗೆ ದೊರಕಿದ್ದರೆ ತಮಗೆ ಇನ್ನೂ ಹೆಚ್ಚಿನ ಸಂತಸವಾಗುತ್ತಿತ್ತು ಎಂದು ವಿನಮ್ರತೆ ವ್ಯಕ್ತಪಡಿಸಿದ ವ್ಯಕ್ತಿತ್ವ ಅವರದು. 

ಜಿ.ಎಸ್.ಎಸ್ ಕಾವ್ಯ ಓದದೇ ಇದ್ದವರೂ ಅವರ ಬದುಕಿನಿಂದ ಕಲಿಯಬೇಕಾದ ಪಾಠಗಳು ಹಲವಷ್ಟಿವೆ. ನವ್ಯ ಮತ್ತು ನವೋದಯದ ಕವಿಗಳು ಕಿತ್ತಾಡುತ್ತಿದ್ದ ಸಮಯದಲ್ಲಿ ಜಿ.ಎಸ್.ಎಸ್ ಅವೆರಡರ ನಡುವಿನ ದಾರಿಯನ್ನು ಕಂಡುಕೊಂಡರು. ಇವತ್ತು ನಾವೂ ಸಹ ನಮ್ಮ ರಾಜಕೀಯ ನಿಲುವುಗಳಲ್ಲಿ ಇಂತಹದ್ದೊಂದು ಸಮನ್ವಯದ ದಾರಿಯೊಂದನ್ನು ಕಂಡುಕೊಳ್ಳುವ ಅನಿವಾರ್ಯ ಸ್ಥಿತಿಯಲ್ಲಿ ನಿಂತಿದ್ದೇವೆ. ಇವತ್ತು ನೀವು ಮೋದಿಯನ್ನು ವಿರೋಧಿಸಿದರೆ ನಿಮ್ಮನ್ನು ಕಮ್ಯುನಿಷ್ಟರೆಂದು ಬ್ರ್ಯಾಂಡ್ ಮಾಡಲಾಗುತ್ತದೆ. ರಾಹುಲ್ ಗಾಂಧಿಯನ್ನು ಟೀಕಿಸಿದರೆ ಕಾಂಗ್ರೆಸ್ಸಿಗರ ಪಾಲಿಗೆ ನೀವು ಕೋಮುವಾದಿಯಾಗುತ್ತೀರಿ. ನಾವು ಒಬ್ಬ ವ್ಯಕ್ತಿಯನ್ನೊ, ಒಂದು ಪಕ್ಷವನ್ನೋ ಬೆಂಬಲಿಸುವ ಭರದಲ್ಲಿ ಆ ನಾಯಕನ ಅಥವಾ ಆ ಪಕ್ಷದ ಸಿದ್ಧಾಂತಗಳಲ್ಲಿನ ಹುಳುಕುಗಳಿಗೆ ಕುರುಡರಾಗುತ್ತಿದ್ದೇವೆ. ಹಿಂದುತ್ವ, ಸಮಾಜವಾದ, ಸಮತಾವಾದ(ಕಮ್ಯುನಿಸಮ್) ಮುಂತಾದ ಎಲ್ಲಾ ರಾಜಕೀಯ ಸಿದ್ಧಾಂತಗಳಲ್ಲಿನ ಉನ್ನತವಾದ ಆಲೋಚನೆಗಳನ್ನು ಮಾತ್ರ ಸ್ವೀಕರಿಸಿ ಅವುಗಳಲ್ಲಿರುವ ಕಸವನ್ನು ಸಾರಾಸಗಾಟಾಗಿ ಧಿಕ್ಕರಿಸಿ ನಮ್ಮದೇ ವಿಶಿಷ್ಟವಾದ ಸಮನ್ವಯದ ದಾರಿಯನ್ನು ಕಂಡುಕೊಳ್ಳದೆ ಹೋದರೆ, ನಾವು ಕುರುಡರಂತೆ ಹಿಂಬಾಲಿಸುತ್ತಿರುವ ರಾಜಕೀಯ ನಾಯಕ ಅಥವಾ ಪಕ್ಷ ನಮ್ಮನ್ನು ಅಭಿವೃದ್ಧಿಯತ್ತಲೂ ಕೊಂಡೊಯ್ಯಬಹುದು ಅಥವಾ ದುರಂತದತ್ತಲೂ ಕೊಂಡೊಯ್ಯಬಹುದು. ಪರಭಾಷಿಕರನ್ನು, ಅನ್ಯಧರ್ಮೀಯರನ್ನು ಅಸಹನೆ, ಅನುಮಾನದಿಂದ ನೋಡುತ್ತಿರುವ ನಮಗೆ, ಜಿ.ಎಸ್.ಎಸ್. ಮತ್ತೆ ಮತ್ತೆ ಹೇಳುತ್ತಿದ್ದ ’ಭಿನ್ನವಾಗಿದ್ದೂ ಬೆರೆಯಬಹುದು’ ಎನ್ನುವ ಮಾತುಗಳು ದಾರಿ ತೋರಬಲ್ಲುದು. ಕೇವಲ ಬದುಕಿನ ಮೂಲಕ ಮಾತ್ರವಲ್ಲ ತಮ್ಮ ಸಾವಿನ ಮೂಲಕವೂ ಜಿ.ಎಸ್.ಎಸ್ ನಮಗೆ ಬೆಳಕು ತೋರಿಸಿದ್ದಾರೆ. ತಾವು ಎಲ್ಲಾ ಸಮುದಾಯಗಳಿಗೂ ಸೇರಿದವರಾದ್ದರಿಂದ ತಮ್ಮ ಅಂತ್ಯಕ್ರಿಯೆಯಲ್ಲಿ ಧಾರ್ಮಿಕ ವಿಧಿ ವಿಧಾನಗಳನ್ನು ಆಚರಿಸಿ ತಮ್ಮನ್ನು ಒಂದು ಸಮುದಾಯಕ್ಕೆ ಸೀಮಿತಗೊಳಿಸಬಾರದು ಎಂದು ಆಶಿಸಿ ಬುದ್ಧ, ಬಸವಣ್ಣ, ಕುವೆಂಪುರಿಂದ ಪಡೆದಿದ್ದ ವಿಶ್ವದೃಷ್ಠಿಯನ್ನು ನಮ್ಮ ತಲೆಮಾರಿಗೆ ಹಸ್ತಾಂತರಿಸಿದ್ದಾರೆ. ಜಾತಿ, ಮತಗಳ ಹೆಸರಿನಲ್ಲಿ ಛಿದ್ರವಾಗಿರುವ ನಮಗೆ, ಭಾರತೀಯತೆ(INDIANISM) ಮಾತ್ರ ನಮ್ಮ ಧರ್ಮವಾಗಿ, ಜಾತಿಯಾಗಿ, ಮಂತ್ರವಾಗಿ ಸ್ವೀಕರಿಸುವ ಮಹತ್ವ ಇನ್ನಾದರೂ ಅರ್ಥವಾಗಬೇಕು. ನಾವು  ಬದುಕಿದ್ದೂ ಕತ್ತಲೆಯಲ್ಲಿದ್ದೇವೆ. ಜಿ.ಎಸ್.ಎಸ್.ರಂಥ ಚೇತನಗಳು ಸಾವಿನ ನಂತರವೂ  ಪ್ರಣತಿಯಂತೆ ಬೆಳಕು ನೀಡುತ್ತಲೇ ಇರುತ್ತಾರೆ. ಅವರು ಹಚ್ಚಿಟ್ಟು ಹೋದ ಹಣತೆಯ ಬೆಳಕು ನಮ್ಮೊಳಗಿನ ಕತ್ತಲೆಯನ್ನು ಕರಗಿಸಿ, ನಮ್ಮನ್ನು ಅಜ್ಞಾನದಿಂದ ಜ್ಞಾನದೆಡೆಗೆ, ಬಂಧನದಿಂದ ಮುಕ್ತಿಯೆಡೆಗೆ, ಮೌಢ್ಯದಿಂದ ಅಧ್ಯಾತ್ಮದೆಡೆಗೆ ಕೊಂಡೊಯ್ಯಲಿ...