Monday 25 November 2013

ಕನ್ನಡಕೆ ಹೋರಾಡು ಕನ್ನಡದ ಕಂದ; ಕನ್ನಡವ ಕಾಪಾಡು ನನ್ನ ಆನಂದ..

         ಮತ್ತೊಂದು ರಾಜ್ಯೋತ್ಸವದ ತಿಂಗಳು ಮುಗಿಯುತ್ತಾ ಬಂದಿದೆ. ಪ್ರತೀ ವರ್ಷದಂತೆ ಈ ಬಾರಿಯೂ ಕರ್ನಾಟಕ ಸರ್ಕಾರ ನೀಡುವ ’ರಾಜ್ಯೋತ್ಸವ ಪ್ರಶಸ್ತಿ’ ಗೊಂದಲ ವಿವಾದದ ಕಾರಣದಿಂದ ಸುದ್ದಿಯಾಗಿದೆ. ದೂರದ ಬೆಳಗಾವಿಯಲ್ಲಿ ಎಂ.ಇ.ಎಸ್. ಕಾರ್ಯಕರ್ತರು ಕರಾಳ ದಿನ ಆಚರಿಸಿದ್ದಾರೆ. ಇಲ್ಲಿ ಬೆಂಗಳೂರಿನಲ್ಲಿ ಎದ್ದ ತಕ್ಷಣ ಸುಪ್ರಭಾತದಂತೆ ಕೇಳಿದ್ದು ಹಿಂದಿ ಹಾಡು! ನಾನಿರುವ ಜಾಗದಿಂದ ಹತ್ತು ಹೆಜ್ಜೆ ದೂರದಲ್ಲಿರುವ ಚಿತ್ರಮಂದಿರದಲ್ಲಿ ತೆಲುಗು ಸಿನಿಮಾ ಓಡುತ್ತಿದೆ. ತಲೆ ಕೆಟ್ಟು ಕಾಲೇಜಿಗೆ ಹೋದರೆ ಹುಡುಗಿಯೊಬ್ಬಳು ಹಿಂದಿನಿಂದ ಬಂದು ಕಚಗುಳಿ ಇಟ್ಟ ಹುಡುಗನಿಗೆ "F**k, you scared the shit out of me!" ಎನ್ನುತ್ತಿದ್ದಳು. ಆ ಮಾತಿನ ಅರ್ಥ ಅವಳಿಗಾದರೂ ತಿಳಿದಿದೆಯಾ ಅನ್ನಿಸಿತು. ಆಕೆ ಹತ್ತು ನಿಮಿಷದಲ್ಲಿ ಎಷ್ಟು ಸಲ f**k ಎನ್ನುವ ಪದ ಬಳಸಬಹುದು ಎಂದು ಎಣಿಸತೊಡಗಿದೆ. ಹದಿನೇಳು ಎಣಿಸುವಷ್ಟರಲ್ಲಿ ಲೆಕ್ಕ ತಪ್ಪಿತು. ನಮ್ಮ ಜೀನ್ಸುಗಳ ಜೊತೆಗೆ ನಮ್ಮ ಮಾತುಗಳೂ low waistಗೆ ಇಳಿದಿವೆಯೇನೋ ಅನ್ನಿಸುತ್ತಿದೆ. ಇದು ಒಂದು ಕಾಲೇಜಿನ ಕಥೆಯಲ್ಲ. ಬೆಂಗಳೂರಿನ ಯಾವ ಕಾಲೇಜಿಗೆ ಕಾಲಿಟ್ಟರೂ ಕನ್ನಡದಲ್ಲಿ ಮಾತನಾಡುವುದೆಂದರೆ ಏನೋ ಕೀಳರಿಮೆ. ಬಹುಶಃ ನಮ್ಮದೇ ಭಾಷೆಯ ಬಗ್ಗೆ ಇಂತಹದ್ದೊಂದು ನಿರ್ಲಕ್ಷ್ಯ, ಅಭಿಮಾನಶೂನ್ಯತೆ ಜಗತ್ತಿನ ಯಾವ ಭಾಗದಲ್ಲೂ ಕಾಣಲು ಸಾಧ್ಯವಿಲ್ಲವೇನೋ.      

    ಕನ್ನಡಕ್ಕೆ ಎರಡು ಸಾವಿರ ವರ್ಷಗಳಿಗೂ ಮಿಗಿಲಾದ ಇತಿಹಾಸವಿರಬಹುದು. ಜಗತ್ತಿನಲ್ಲಿಯೇ ಅತಿ ಹೆಚ್ಚು ಜನ ಮಾತನಾಡುವ ನಲವತ್ತು ಭಾಷೆಗಳಲ್ಲಿ ಒಂದಾಗಿರಬಹುದು. ಕೇಂದ್ರ ಸರ್ಕಾರ ಶಾಸ್ತ್ರೀಯ ಭಾಷೆಯ ಸ್ಥಾನಮಾನವನ್ನು ನೀಡಿರಬಹುದು. ನಮಗೆ ಎಂಟು ಜ್ಞಾನಪೀಠ ಪ್ರಶಸ್ತಿಗಳೂ ದೊರೆತಿರಬಹುದು. ಆದರೆ ಒಂದು ಭಾಷೆ ಎಷ್ಟೇ ಶ್ರೀಮಂತವಾಗಿದ್ದರೂ ಜನರು ಮಾತನಾಡಲು ನಿಲ್ಲಿಸಿದ ದಿನವೇ ಅದರ ವಿನಾಶವಾಗುತ್ತದೆ. ಸಂಸ್ಕೃತದ ಜ್ವಲಂತ ಉದಾಹರಣೆ ನಮ್ಮ ಕಣ್ಣ ಮುಂದೆಯೇ ಇದೆ. ಆದರೂ ನಾವು ಇತಿಹಾಸದಿಂದ ಪಾಠ ಕಲಿಯುವ ಹಾಗೆ ಕಾಣುತ್ತಿಲ್ಲ. ಪಂಪನಿಂದ ಚಂಪಾವರೆಗೆ, ಎಂತಹ ಉನ್ನತ ಮಟ್ಟದ ಸಾಹಿತ್ಯವೇ ಕನ್ನಡದಲ್ಲಿ ಸೃಷ್ಠಿಯಾಗಿದ್ದರೂ ಅದು ಭಾಷೆಯ ವಿನಾಶವನ್ನು ತಡೆಯಲಾರದು. ತೇಜಸ್ವಿ, ಭೈರಪ್ಪ, ಲಂಕೇಶರನ್ನು ಬಿಟ್ಟರೆ ಕನ್ನಡದಲ್ಲಿ ಮತ್ತಾವ ಲೇಖಕನಿಗೂ ತನ್ನದೇ ಆದ ಓದುಗ ಸಮೂಹವೇ ಇಲ್ಲ. ಬೆಂಗಳೂರಿನಂತಹ ನಗರಗಳ ಜೀವನಶೈಲಿ ಹೆಜ್ಜೆ ಹೆಜ್ಜೆಗೂ ಒಡ್ಡುವ ಸ್ಪರ್ಧೆಯಲ್ಲಿ ಉಳಿದುಕೊಳ್ಳಲು ಜ್ಞಾನ(knowledge) ಬೇಕಾಗಿಲ್ಲ, ತಲೆ ತುಂಬಾ ಮಾಹಿತಿ(information) ಇದ್ದರೆ ಸಾಕು. ಸಾವಿರಾರು ಒತ್ತಡಗಳ ನಡುವೆ ಮನೆ ಸೇರಿದವನಿಗೆ ಮನಸ್ಸು ನಿರಾಳಗೊಳ್ಳಲು ಅಗ್ಗದ ಮನರಂಜನೆ ಬೇಕು. ಇಂಗ್ಲಿಷು ಮಾಹಿತಿ ಮತ್ತು ಮನರಂಜನೆ ಎರಡನ್ನೂ ಯಥೇಚ್ಛವಾಗಿ ಒದಗಿಸುತ್ತಿದೆ. ಇವತ್ತು ಕನ್ನಡ ವಿಕಿಪೀಡಿಯಾ ತೆರೆದರೆ ಅಬ್ಬಬ್ಬಾ ಎಂದರೆ ಕೇವಲ ಸಾವಿರ ಪುಟಗಳಷ್ಟು ಮಾಹಿತಿ ಸಿಗಬಹುದು. ಸರ್ ಎಂ.ವಿ.ಯಿಂದ ಹಿಡಿದು ಅನಿಲ್ ಕುಂಬ್ಳೆಯವರೆಗೆ ಪ್ರತಿಯೊಂದು ಪುಟದಲ್ಲೂ ಹೆಚ್ಚೆಂದರೆ ಎರಡು ಸಾಲು ಮಾಹಿತಿ ಸಿಕ್ಕೀತು ಅಷ್ಟೇ! ಅದೇ ಇಂಗ್ಲಿಷ್ ವಿಕಿಪೀಡಿಯಾದೊಳಗೆ ಕಾಲಿಟ್ಟರೆ ಇಡೀ ಜಗತ್ತೇ ನಿಮ್ಮ ಮುಷ್ಟಿಯೊಳಗಿದ್ದಂತೆ ಭಾಸವಾಗುತ್ತದೆ!        

    ಕನ್ನಡದ್ದೇ ಆದ ಸ್ವತಂತ್ರ ತಂತ್ರಾಂಶ(software)ವೊಂದು ಇದ್ದಿದ್ದರೆ, ಕನ್ನಡದಲ್ಲೇ ಬೇಕಾದ ಮಾಹಿತಿಯನ್ನು ಪಡೆಯುವ ಹಾಗಿದ್ದರೆ ಕನ್ನಡದ ಬಳಕೆ ಇಷ್ಟೊಂದು ಅಧೋಗತಿಗೆ ಇಳಿಯುತ್ತಿರಲಿಲ್ಲ. ಸರ್ಕಾರಕ್ಕಂತೂ ಇಚ್ಛಾಶಕ್ತಿ ಇಲ್ಲ. ಸಾಹಿತಿ, ಬುದ್ಧಿಜೀವಿಗಳು ಎನ್ನಿಸಿಕೊಂಡವರಾದರೂ ದನಿಯೆತ್ತಬಾರದೆ? ತೇಜಸ್ವಿಯವರು ಬದುಕಿದ್ದಷ್ಟು ದಿನ ಕಂಬಾರರೊಂದಿಗೆ ಕೂಡಿ ಕನ್ನಡ ತಂತ್ರಾಂಶಕ್ಕೋಸ್ಕರ ಸರ್ಕಾರದ ಜೊತೆ ಗುದ್ದಾಡಿದ್ದು ಬಿಟ್ಟರೆ ಉಳಿದವರಿಗೆ ಕಾಳಜಿಯೇ ಇಲ್ಲ ಎನ್ನಿಸುತ್ತದೆ. ಇವರಿಗೆಲ್ಲಾ ಜ್ಞಾನಪೀಠ, ಪದ್ಮಭೂಷಣಗಳನ್ನು ಪಡೆಯಲು ಕನ್ನಡ ಬೇಕು, ಅಕಾಡೆಮಿಗಳ ಅಧ್ಯಕ್ಷರಾಗಲು, ಕೇಂದ್ರೀಯ ವಿಶ್ವವಿದ್ಯಾಲಯಗಳ ಕುಲಪತಿಗಳಾಗಲು ಕನ್ನಡ ಬೇಕು ಆದರೆ ರಾಜ್ಯದ ರಾಜಧಾನಿಯಲ್ಲಿಯೇ ಕನ್ನಡದ ಉಳಿವಿಗೆ ಕುತ್ತು ಬಂದಾಗ ಎದ್ದು ನಿಲ್ಲಬೇಕೆಂಬ ಕನಿಷ್ಠ ಕೃತಜ್ಞತೆ ಬೇಡವೇ?! ಇವರ ಪಾಲಿಗೆ ಕನ್ನಡವೆಂದರೆ ಮಾತೃಭಾಷೆಯಲ್ಲ, ಅದೊಂದು ಅಭಿವ್ಯಕ್ತಿಯ ಮಾಧ್ಯಮ ಅಷ್ಟೇ! ಕನ್ನಡದವಿಲ್ಲದೇ ಹೋದರೆ ನಾಳೆ ಇಂಗ್ಲಿಷು, ಮರಾಠಿಯಲ್ಲಿ ಬರೆಯುತ್ತಾರೆ. ಮಾತೆತ್ತಿದರೆ ನೆಹರೂ, ಮೋದಿ, ಟ್ಯಾಗೋರ್ ಎನ್ನುತ್ತಾ ತಾವು ಅಂತರಾಷ್ಟ್ರೀಯ ಸ್ತರದಲ್ಲಿ ಅಖಂಡ ಭಾರತವನ್ನು ಪ್ರತಿನಿಧಿಸುವ ಲೇಖಕರೆಂದು ತೋರಿಸಿಕೊಳ್ಳುವ ಹುಕಿಗೆ ಬಿದ್ದವರಿಗೆ ಎಲ್ಲಿ ಕನ್ನಡದ ಕುರಿತು ಮಾತನಾಡಿದರೆ ತಾವು ರಾಜ್ಯ ಮಟ್ಟಕ್ಕೆ ಸೀಮಿತವಾಗುತ್ತೇವೆಯೋ ಎಂಬ ಆತಂಕವಿದ್ದರೂ ಇದ್ದೀತು!           

   ಮಕ್ಕಳಿಗೆ ಪ್ರಾಥಮಿಕ ಹಂತದಲ್ಲೇ ಕನ್ನಡದ ಕುರಿತು ಅಭಿಮಾನ ಬೆಳೆಸುವ ಜವಾಬ್ದಾರಿಯನ್ನು ಪೋಷಕರು ಇವತ್ತೇ ಹೊತ್ತುಕೊಳ್ಳದಿದ್ದರೆ ನಾಳೆ ನಮ್ಮ ಕಣ್ಣ ಮುಂದೆ ನಮ್ಮದೇ ಭಾಷೆ ಅವನತಿ ಹೊಂದುವುದನ್ನು ನೋಡಬೇಕಾಗುತ್ತದೆ. ಕನ್ನಡ ಮಾಧ್ಯಮದಲ್ಲಿ ಮಕ್ಕಳನ್ನು ಓದಿಸಿ ಎಂದು ನಾನೇನೂ ಕೇಳುತ್ತಿಲ್ಲ. ಕಡೇಪಕ್ಷ ಮಕ್ಕಳು ಕನ್ನಡವನ್ನು ಪ್ರೀತಿಸುವ ಹಾಗೆ ಮಾಡಿ. ತನ್ನ ಮಾತೃಭಾಷೆಯನ್ನೇ ಸ್ಫುಟವಾಗಿ ಮಾತನಾಡಲು ಬಾರದ ಮಗು ಇಂಗ್ಲಿಷನ್ನೂ ಸರಾಗವಾಗಿ ಮಾತನಾಡಲಾರದು. ನಿಮ್ಮ ಮಗುವಿನ ಕೈಗೆ ಹ್ಯಾರಿ ಪಾಟರ್ ಕೊಡುವ ಮೊದಲು ’ಬೊಮ್ಮನಹಳ್ಳಿಯ ಕಿಂದರಿಜೋಗಿ’ ಕೊಡಿ. ಬಿಗ್ ಬಾಸ್‌ನಂತಹ ದರಿದ್ರ ರಿಯಾಲಿಟಿ ಶೋಗಳನ್ನು ನೀವೂ ನೋಡಿ ಮಕ್ಕಳಿಗೂ ತೋರಿಸುವ ಬದಲು ಅವರೊಂದಿಗೆ ಕುಳಿತು ಒಮ್ಮೆ ಗೋವಿನ ಹಾಡನ್ನು ಓದಿ. Twinkle twinkle little star ಎಂದು ಉಲಿಯುವ ಮಗುವಿನ ಬಾಯಲ್ಲಿ ’ಮಿನುಗೆಲೆ ಮಿನುಗೆಲೆ ನಕ್ಷತ್ರ’ ಎಂದು ಹಾಡಿಸಿ ನೋಡಿ. ’Jack and Jill, went up to hill’ ಎಂಬ ರಚನೆಗಿಂತ ’ತಿಂಗಳ ಬೆಳಕಿನ ಇರುಳಿನೊಳಂದು/ ಅಮ್ಮನು ಕೆಲಸದೊಳಿರುವುದ ಕಂಡು/ ಗೋಪಿಯೂ ಪುಟ್ಟೂ ಹೊರಗಡೆ ಬಂದು/ ಬಾವಿಗೆ ಇಣುಕಿದರು// ಎಂಬ ಕಲ್ಪನೆಯೇ ಅದ್ಭುತವಾಗಿಲ್ಲವೇ? ’Johny johny yes pappa, eating sugar no pappa’ ಎನ್ನುವ ಸಾಲುಗಳಿಗೆ ಏನಾದರೂ ಅರ್ಥವಿದೆಯೇ? ಕನ್ನಡದಲ್ಲಿ ಮಕ್ಕಳ ಸಾಹಿತ್ಯಕ್ಕೇನೂ ಕೊರತೆ ಇಲ್ಲ. ಪಂಜೆ ಮಂಗೇಶರಾಯರಿಂದ ನಾ.ಡಿಸೋಜಾವರೆಗೆ, ಕುವೆಂಪುರಿಂದ ಎಚ್.ಎಸ್.ವೆಂಕಟೇಶಮೂರ್ತಿಯವರೆಗೆ ಮಕ್ಕಳ ಭಾವಲೋಕವನ್ನು ಪ್ರಚೋದಿಸುವ, ಅವರ ಕಲ್ಪನೆಯನ್ನು ಉದ್ದೀಪಿಸುವ ಕಥೆ, ಕವಿತೆಗಳನ್ನು ರಚಿಸಿದ್ದಾರೆ. ಕೇವಲ ೧೫೦೦ ವರ್ಷಗಳ ಇತಿಹಾಸವಿರುವ ಯಾರಿಂದಲೋ ಎರವಲು ಪಡೆದ ಭಾಷೆಯಲ್ಲಿ ನಿಮ್ಮ ಮಗುವಿನ ಬಾಲ್ಯವನ್ನು ಸಂಕುಚಿತಗೊಳಿಸುವ ಬದಲು, ೨೮೦೦ ವರ್ಷಗಳ ಅಗಾಧವಾದ ಚರಿತ್ರೆ ಇರುವ ನಮ್ಮದೇ ಭಾಷೆಯಲ್ಲಿ ಕಲಿತು ಮುದಗೊಳ್ಳಲು ಬಿಡಿ. ಇತಿಹಾಸವನ್ನು ಹೊರಗಿಟ್ಟು ನೋಡಿದರೂ ಇಂಗ್ಲಿಷ್‌ಗಿಲ್ಲದ ಸೌಂದರ್ಯ, ಮಾಧುರ್ಯ ಕನ್ನಡಕ್ಕಿದೆ. ಪುರಾವೆ ಬೇಕಿದ್ದರೆ ಇಲ್ಲಿದೆ ನೋಡಿ.


LEAD, Kindly Light, amid the encircling gloom
          Lead Thou me on!
The night is dark, and I am far from home—
          Lead Thou me on!
Keep Thou my feet; I do not ask to see
The distant scene—one step enough for me.

 ಕರುಣಾಳು ಬಾ ಬೆಳಕೆ ಮುಸುಕಿದೀ ಮಬ್ಬಿನಲಿ
ಕೈಹಿಡಿದು ನಡೆಸೆನ್ನನು//
ಇರುಳು ಕತ್ತಲೆಯ ಗವಿ ಮನೆ ದೂರ ಕನಿಕರಿಸಿ
ಕೈ ಹಿಡಿದು ನಡೆಸೆನ್ನನು
ಹೇಳಿ ನನ್ನಡಿ ಇಡಿಸು ಬಲು ದೂರ ನೋಟವನು
ಕೇಳಿದೊಡನೆಯೆ ಸಾಕು ನನಗೊಂದು ಹೆಜ್ಜೆ..       


   ಮೊದಲನೆಯದು ಜಾನ್ ಹೆನ್ರಿ ನ್ಯೂಮನ್ ಬರೆದ ಇಂಗ್ಲಿಷ್ ಕವಿತೆಯ ಸಾಲುಗಳು. ಎರಡನೆಯದು ಬಿ.ಎಂ.ಶ್ರೀಯವರು ಅನುವಾದ ಮಾಡಿರುವ ಅದೇ ಸಾಲುಗಳು. ಈಗ ನೀವೆ ಓದಿ ಹೇಳಿ ಈ ಎರಡು ಕವಿತೆಗಳಲ್ಲಿ ಯಾವುದು ಕೇಳಲು ಹಿತವಾಗಿದೆ ಎಂದು!

Monday 18 November 2013

ಪ್ರಾರ್ಥನೆ

(ಈ ಕವಿತೆಯೊಂದಿಗೆ 2014ರವರೆಗೆ ಬ್ಲಾಗಿಂಗ್ ಕೆಲಸಕ್ಕೆ ರಜೆ ಹಾಕುತ್ತಿದ್ದೇನೆ, ನಮಸ್ಕಾರ!)  


ನೀನು ನಾನಾಗು,
 ನನ್ನ ದೇಹದ ಆತ್ಮವಾಗು,
ನನ್ನ ಆತ್ಮದ ದೇಹವಾಗು,
ನನ್ನ ಒಬ್ಬಂಟಿ ರಾತ್ರಿಗಳನ್ನು ನಿನ್ನ ಮುಂದೆ ತಂದು ಹರಡುತ್ತೇನೆ,
ಒಂದೊಂದಕ್ಕೂ ನಿನ್ನ ನಗುವಿನ ದೀಪ  ಹಚ್ಚಿ ಸಡಗರಗೊಳಿಸು!
ನನ್ನ ಆಸೆಗಳ ಪೂರೈಸುತ್ತಲೇ ಆಸೆಗಳ 
ಗೆಲ್ಲುವುದನ್ನು ಕಲಿಸು.. 
ನಿನ್ನ  ಪ್ರೀತಿಯ  ಮುಂದೆ ನನ್ನ ಅಹಂಕಾರ ಎಷ್ಟು ನಿಕೃಷ್ಠವಾದುದೆಂದು,
ನನ್ನ ಕಿವಿ ಹಿಂಡಿ ತಿಳಿಸು.. 
ಕೆನ್ನೆ ಒದ್ದೆಯಾಗುವ ಮುಂಚೆಯೇ ನಿನ್ನ ಕಣ್ಣೀರನ್ನೆಲ್ಲಾ 
ನನ್ನ ಬೊಗಸೆಯೊಳಗೆ ಇಳಿಸು!
ನಿನ್ನೊಳಗಿನ  ತಾಯ್ತನವನ್ನು ನನಗೂ ಸ್ವಲ್ಪ ಕಲಿಸು!
ನಿನ್ನ ಅಷ್ಟೂ ಕನಸುಗಳ copyright ನನಗೆ ಕೊಡು!
ನಿನಗೋಸ್ಕರ ಸಾವಿರ ಹಾಡುಗಳನ್ನು ಹಾಡುತ್ತೇನೆ,
ಹಾಡು ಇಷ್ಟವಾಗದಿದ್ದರೂ ನನಗೋಸ್ಕರ ನಕ್ಕುಬಿಡು.. 
ಹಗಲು ಹದಿನಾರು ಸಾವಿರ ಮುತ್ತುಗಳನ್ನು ಸಾಲ ಕೊಡುತ್ತೇನೆ,
ಆ ರಾತ್ರಿಯೇ ಬಡ್ಡಿ ಸಮೇತ ತೀರಿಸಿಬಿಡು!
ಒಂದು ಕ್ಷಣವೂ  ನಿನ್ನಿಂದ ದೂರವಾಗದಂತೆ 
ನಿನ್ನ ತೋಳುಗಳಲ್ಲಿ ಬಂಧಿಸು!
ನನ್ನ ಬೆತ್ತಲೆ ಎದೆಯ ಮೇಲೆ ನಿನ್ನ 
ಪಾದಗಳ ಗುರುತು ಮೂಡಿಸು.. 
ತೊಡೆಯ ಮೇಲೆ ನನ್ನ ಮಲಗಿಸಿಕೊಂಡು 
ನಿನ್ನ ಸ್ತನಗಳ ಪ್ರೀತಿಯನ್ನು ಕುಡಿಸು.. 
ನನ್ನ ಕೋಪ ಮಂಜುಗಡ್ಡೆಯಂತೆ ಗಟ್ಟಿಯಾದಂತೆಲ್ಲಾ,
ನಿನ್ನ ಅಪ್ಪುಗೆಯ ಬಿಸಿಯಿಂದ ಕರಗಿಸು.. 
ಜಗತ್ತಲ್ಲಿ ಬರೀ ಮೂರು ಜನರನ್ನು ಪ್ರೀತಿಸು,
ನನ್ನನ್ನು, ನನ್ನನ್ನು ಮತ್ತು ನನ್ನನ್ನು ಮಾತ್ರ!!