ನೀ ದೂರಾದ ಹೊತ್ತಲ್ಲಿ,
ನಾನು ನಾನಾಗಿರಲಿಲ್ಲ;
ಎದೆಗೆ ವಿಷವೇರಿದ ಮತ್ತಲ್ಲಿ,
ಮೌನ ಮಾತಾಗಿರಲಿಲ್ಲ..
ಇನ್ನಾದರೂ ಹರಿಯಲಿ, ನೆನಪುಗಳ ಒರತೆ,
ನಿನ್ನದೇ ಮೋಹಕ್ಕೆ, ಶರಣಾಗಿದೆ ಕವಿತೆ!
ನೀ ಹೋದ ದಾರಿಯಲಿ ಉಸಿರೊಂದು ಚೆಲ್ಲಿದೆ,
ತನ್ನನ್ನೇ ಬಿಗಿಹಿಡಿದು ದನಿಯೊಂದ ಹುಡುಕಿದೆ;
ಹಸಿದಿರುವ ಜೀವಕ್ಕೆ ಮುತ್ತೊಂದ ಕೇಳುವೆ,
ಮತ್ತೆಂದು ಬರುವೆ ನೀ ಕೊನೆಯಿರದ ಮೌನವೇ?
ಅನುಕ್ಷಣವೂ ತೆರೆಯುವೆ ನೆನಪುಗಳ ಬಾಗಿಲು,
ಒಳಹೋದರೆ ವಶವಾಗುವೆ ನಿನ್ನುಸಿರು ತಾಕಲು;
ಈ ಸಂಜೆ ಯಾತಕೋ ಖಾಲಿಯಾಗಿಯೇ ಕಳೆದಿದೆ,
ನೀನಿರದೆ ಹೋಗಲು ಮತ್ತೇನು ಉಳಿದಿದೆ?
ಆವರಿಸು ನೀ ನನ್ನ ಕನಸಿನಲ್ಲಾದರೂ,
ಅನುಭವಿಸು ಎಲ್ಲವನು ನಾ ಹೇಳದೆಯೇ ಹೋದರೂ;
ನೀ ನಕ್ಕಾಗಲೆಲ್ಲಾ ನನಗೊಂದು ನಕ್ಷತ್ರ ಸಿಗಲು,
ಈ ರಾತ್ರಿ ಬೊಗಸೆಯಲಿ ತುಂಬಿರಲಿ ಮುಗಿಲು!
15/05/2012
Chikmagalur
No comments:
Post a Comment